ಬೆಂಗಳೂರು: ‘ನನ್ನ ಕೊಲೆಗೆ ಸಂಚು ನಡೆಯುತ್ತಿರುವ ಸುಳಿವು ಮೊದಲೇ ಲಭಿಸಿತ್ತು. ಈ ವಿಚಾರವನ್ನು ಗೃಹ ಸಚಿವರ ಗಮನಕ್ಕೂ ತಂದಿದ್ದೆ. ಕುಳ್ಳ ದೇವರಾಜ್ ಮಂಗಳವಾರ ಸಂಜೆ ಕ್ಷಮಾಪಣೆ ಪತ್ರ ಕಳುಹಿಸಿದಾಗ ಖಚಿತವಾಯಿತು’ ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಲಹಂಕದಲ್ಲಿ ನನ್ನನ್ನು ರಾಜಕೀಯವಾಗಿ ಸೋಲಿಸಲು ಆಗುವುದಿಲ್ಲ ಎಂಬ ಕಾರಣಕ್ಕೆ ಎಂ.ಎನ್.ಗೋಪಾಲಕೃಷ್ಣ ಈ ಪ್ರಯತ್ನ ಮಾಡಿದ್ದಾನೆ. ಕುಳ್ಳ ದೇವರಾಜ್ ಅಪರಾಧಿ ಹಿನ್ನೆಲೆಯ ವ್ಯಕ್ತಿ. ಆತನನ್ನು ಬಳಸಿಕೊಂಡು ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನನ್ನ ಕೊಲೆಗೆ ಸಂಚು ರೂಪಿಸಿದ್ದರು’ ಎಂದು ಆರೋಪಿಸಿದರು.
ಹಲ್ಲೆ ನಡೆಯುವ ಅನುಮಾನ ಇತ್ತು. ಇದೇ ಕಾರಣಕ್ಕಾಗಿ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆಗೆ ನಾಲ್ಕು ಬಾರಿ ಪತ್ರ ಬರೆಯಲಾಗಿತ್ತು. ಕಾಂಗ್ರೆಸ್ ಸರ್ಕಾರ ಇದ್ದಾಗ ದುರುದ್ದೇಶದಿಂದ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಕಡಬಗೆರೆ ಶ್ರೀನಿವಾಸ್ ತಮ್ಮ ಜತೆಗೆ ಇದ್ದ ವ್ಯಕ್ತಿ. ಆತನ ಹತ್ಯೆಗೂ ತಮಗೂ ಸಂಬಂಧವಿಲ್ಲ. ಎಲ್ಲ ಪ್ರಕರಣಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.