ಬೆಂಗಳೂರು: ಮೊಬೈಲ್ ಕಳ್ಳತನ ಸಂಬಂಧ ಆನ್ಲೈನ್ ಮೂಲಕ ಸಾರ್ವಜನಿಕರು ನೀಡಿದ್ದ ದೂರುಗಳ ತನಿಖೆ ಕೈಗೊಂಡಿದ್ದ ಪೊಲೀಸರು, ತಾಂತ್ರಿಕ ಪುರಾವೆ ಆಧರಿಸಿ ₹ 18 ಲಕ್ಷ ಮೌಲ್ಯದ 112 ಮೊಬೈಲ್ಗಳನ್ನು ಜಪ್ತಿ ಮಾಡಿದ್ದಾರೆ.
ಜಪ್ತಿ ಮಾಡಿರುವ ಮೊಬೈಲ್ಗಳ ಪೈಕಿ ಹಲವು ಮೊಬೈಲ್ಗಳನ್ನು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರು ದೂರುದಾರರಿಗೆ ಶನಿವಾರ ಹಸ್ತಾಂತರಿಸಿದರು. ಕೆಲ ಮೊಬೈಲ್ಗಳ ಮಾಲೀಕರ ಪತ್ತೆಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.
‘ಮೊಬೈಲ್, ಅಗತ್ಯ ವಸ್ತುಗಳು ಹಾಗೂ ದಾಖಲೆಗಳ ಕಳ್ಳತನ ಸಂಬಂಧ ದೂರು ನೀಡಲು ಆನ್ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರದ ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಹಾಗೂ ರಾಜ್ಯ ಪೊಲೀಸ್ ಇಲಾಖೆಯ ‘ಇ–ಲಾಸ್ಟ್’ ವ್ಯವಸ್ಥೆ ಮೂಲಕ ದೂರು ನೀಡಲು ಅವಕಾಶವಿದೆ’ ಎಂದು ಪ್ರತಾಪ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಹಲವು ಸಾರ್ವಜನಿಕರು, ಸಿಇಐಆರ್ ಹಾಗೂ ಇ–ಲಾಸ್ಟ್ ಮೂಲಕ ಮೊಬೈಲ್ ಕಳ್ಳತನ ಸಂಬಂಧ ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗಿತ್ತು. ತಂತ್ರಜ್ಞಾನದ ಮೂಲಕ, ಮೊಬೈಲ್ ಇರುವ ಜಾಗಗಳನ್ನು ಪತ್ತೆ ಮಾಡಲಾಗಿತ್ತು. ರಾಜಸ್ಥಾನ, ಕೇರಳ, ತಮಿಳುನಾಡು ಹಾಗೂ ಕರ್ನಾಟಕದ ಹಲವೆಡೆ ಕಾರ್ಯಾಚರಣೆ ನಡೆಸಿ ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.
‘ಮೊಬೈಲ್ ಕಳ್ಳತನವಾದ ಸಂದರ್ಭದಲ್ಲಿ ಸಾರ್ವಜನಿಕರು ಠಾಣೆಗೆ ಬರುವ ಅವಶ್ಯಕತೆ ಇಲ್ಲ. ಮೊಬೈಲ್ನಲ್ಲಿಯೇ ಸಿಇಐಆರ್ ಹಾಗೂ ಇ– ಲಾಸ್ಟ್ ಮೂಲಕ ದೂರು ದಾಖಲಿಸಬಹುದು. ಆಯಾ ಠಾಣೆ ಅಧಿಕಾರ ಸಹಿಯುಳ್ಳ ಸ್ವೀಕೃತಿ ಸಹ ಪಿಡಿಎಫ್ ಮಾದರಿಯಲ್ಲಿ ದೊರೆಯಲಿದೆ’ ಎಂದರು.
ಆರೋಪಿಗಳ ಬಂಧನ
ಬೆಂಗಳೂರು: ನಗರದ ಹಲವು ಮನೆಗಳಲ್ಲಿ ಕಳ್ಳತನ ಮಾಡಿ ನೇಪಾಳಕ್ಕೆ ಪರಾರಿಯಾಗಿದ್ದ ಆರೋಪಿಗಳನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅವರಿಂದ ₹ 2 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
‘ನೇಪಾಳದ ನೇತ್ರಾಶಾಹಿ ಅಲಿಯಾಸ್ ಪ್ರೇಮ್ಶಾಹಿ (43), ಲಕ್ಷ್ಮಿ ಸೇಜುವಲ್ (33), ಗೊರಕ್ ಬಹದ್ದೂರ್ ಶಾಹಿ (50), ಭೀಮ್ ಬಹದ್ದೂರ್ ಶಾಹಿ (45), ಅಂಜಲಿ (31), ಅಬೇಶ್ ಶಾಹಿ (21), ಪ್ರಶಾಂತ್ (21), ಪ್ರಕಾಶ್ ಶಾಹಿ (31), ಅರ್ಜುನ್ ಶಾಹಿ, ಪೂರನ್ ಶಾಹಿ, ಹರೀಶ್ ಶಾಹಿ, ರಮಿತ್ ಠಾಕೂರ್, ಬಿಕಾಸ್, ಹೇಮಂತ್, ಸುಷ್ಮಿತಾ, ರೋಷನ್ ಪದಮ್ ಶಾಹಿ ಹಾಗೂ ಪ್ರೇಮ್ ಬಂಧಿತರು’ ಎಂದು ಪ್ರತಾಪ್ ರೆಡ್ಡಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.