ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ಕದ್ದಿದ್ದ ದ್ವಿಚಕ್ರ ವಾಹನಗಳಲ್ಲಿ ತೆರಳಿ, ಸಾರ್ವಜನಿಕರಿಂದ ಮೊಬೈಲ್ಗಳನ್ನು ಕದಿಯುತ್ತಿದ್ದ ಮೂವರು ಆರೋಪಿಗಳನ್ನು ಕಾಟನ್ಪೇಟೆ ಪೊಲೀಸರು ಬಂಧಿಸಿದ್ದಾರೆ.
ಕಾಟನ್ಪೇಟೆ ನಿವಾಸಿಗಳಾದ ಸೈಯದ್ ಅರ್ಬಾಸ್ (20), ದಾದಾಪೀರ್ (22) ಹಾಗೂ ಜಬ್ಬಿ ಪಾಷಾ (19) ಬಂಧಿತರು.
ಮಾ.5ರ ರಾತ್ರಿಕಾಟನ್ಪೇಟೆ ಠಾಣಾ ವ್ಯಾಪ್ತಿಯ ಮನ್ವರ್ತಿಪೇಟೆ ಬಳಿ ಶುದ್ಧ ಕುಡಿಯುವ ನೀರಿನ ಘಟಕದ ಬಳಿ ಇಬ್ಬರು ಬಂದಿದ್ದರು. ಇದೇ ವೇಳೆ ಏಕಾಏಕಿ ಬೈಕ್ನಲ್ಲಿ ಬಂದಿದ್ದ ಮೂವರು ಆರೋಪಿಗಳು, ಚಾಕು ತೋರಿಸಿ ಅವರ ಬಳಿ ಇದ್ದ ಮೊಬೈಲ್ಗಳು ಹಾಗೂ ನಗದು ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿತ್ತು.
‘ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಾಟನ್ಪೇಟೆ, ಬ್ಯಾಡರಹಳ್ಳಿ, ಮಹಾಲಕ್ಷ್ಮೀ ಬಡಾವಣೆ ಸೇರಿದಂತೆ ಹಲವೆಡೆ ದ್ವಿಚಕ್ರ ವಾಹನಗಳನ್ನು ಕದ್ದಿದ್ದರು. ಅದೇ ವಾಹನಗಳಲ್ಲಿ ತೆರಳಿ, ಶಾಂತಲಾ ವೃತ್ತ, ಮೆಜೆಸ್ಟಿಕ್, ರೈಲ್ವೆ ನಿಲ್ದಾಣಗಳ ಬಳಿ ಸಾರ್ವಜನಿಕರನ್ನು ಬೆದರಿಸಿ ಮೊಬೈಲ್ ಕದ್ದಿರುವ ವಿಚಾರ ತಿಳಿಸಿದರು’ ಎಂದು ಪೊಲೀಸರು ಮಾಹಿತಿ ನೀಡಿದರು.
‘ಆರೋಪಿಗಳಿಂದ 16 ಮೊಬೈಲ್ಗಳು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 397ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.