ಬೆಂಗಳೂರು: ‘ಮಾರಣಾಂತಿಕ ಮಂಗನ ಕಾಯಿಲೆಯನ್ನು ಪೂರ್ಣಪ್ರಮಾಣದಲ್ಲಿ ನಿಯಂತ್ರಿಸಲು ರಾಜ್ಯದ ವಿವಿಧೆಡೆ ಪ್ರಯೋಗಾಲಯ ವಿಸ್ತರಣೆ ಮಾಡುವ ಜತೆಗೆ ನಿರ್ದಿಷ್ಟ ಲಸಿಕೆಯನ್ನು ಸಂಶೋಧಿಸಬೇಕು’ ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್ಸಿಡಿಸಿ) ಹಾಗೂಕೇಂದ್ರ ಸರ್ಕಾರ ನಗರದಲ್ಲಿ ಆಯೋಜಿಸಿದ್ದ ‘ಕ್ಯಾಸನೂರು ಅರಣ್ಯ ರೋಗದ ರಾಷ್ಟ್ರೀಯ ಸಮಾಲೋಚನೆ’ ಕಾರ್ಯಕ್ರಮದಲ್ಲಿ ತಜ್ಞರು ವಿಷಯ ಮಂಡಿಸಿದರು.
ಪಶುಸಂಗೋಪನೆ, ಅರಣ್ಯ ಇಲಾಖೆ (ವನ್ಯಜೀವಿ ವಿಭಾಗ), ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರಾಷ್ಟ್ರಮಟ್ಟದ ಸಂಶೋಧನಾ ಸಂಸ್ಥೆಗಳ ತಜ್ಞರು ಭಾಗಹಿಸಿದ್ದರು. ಸೋಂಕು ಪತ್ತೆ, ನಿಯಂತ್ರಣ, ರೋಗಿಗಳ ನಿರ್ವಹಣೆ, ಭವಿಷ್ಯದಲ್ಲಿ ಆಗಬೇಕಿರುವ ಸಂಶೋಧನೆಗಳು, ಸರ್ಕಾರದ ಇತರೆ ಇಲಾಖೆಗಳು ನೀಡಬೇಕಾದ ಸೌಲಭ್ಯಗಳು ಹಾಗೂ ಅವರ ಕಾರ್ಯಚಟುವಟಿಕ ಕುರಿತು ಚರ್ಚೆ ನಡೆಸಲಾಯಿತು.
ಕರ್ನಾಟಕ, ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡಿನಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದ್ದು, ಕಾಯಿಲೆ ನಿವಾರಣೆಗೆ ಐದು ರಾಜ್ಯಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕೆಂಬ ಅಭಿಪ್ರಾಯ ವ್ಯಕ್ತವಾದವು.
ಮಂಗನ ಕಾಯಿಲೆ ಹಾಗೂ ಡೆಂಗಿ ರೋಗಿಗಳ ಚೇತರಿಕೆಗೆ ನಿರ್ದಿಷ್ಟ ಹಾಗೂ ಪರಿಣಾಮಕಾರಿ ಲಸಿಕೆಯನ್ನು ಕಂಡು ಹಿಡಿಯಬೇಕು. ರಾಜ್ಯದಲ್ಲಿ ಸದ್ಯ ಬೆಂಗಳೂರು, ಶಿವಮೊಗ್ಗ ಹಾಗೂ ಮಣಿಪಾಲದಲ್ಲಿ ಮಾತ್ರ ಸೋಂಕು ಪತ್ತೆ ಪ್ರಯೋಗಾಲಯವಿದ್ದು, ಅವುಗಳ ಸಂಖ್ಯೆ ಹೆಚ್ಚಿಸಬೇಕು ಎಂಬ ಸಲಹೆಯನ್ನು ತಜ್ಞರು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.