ಬೆಂಗಳೂರು: ‘ನಗರದಲ್ಲಿ ಮಂಗಗಳ ಹಾವಳಿ ಬಗ್ಗೆ ದೂರು ನೀಡಲು ಸ್ಥಾಪಿಸಲಾಗಿರುವ ಹೆಲ್ಪ್ಲೈನ್ ಹಾಗೂ ದೂರ ವಾಣಿ ಸಂಖ್ಯೆಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಆದೇಶಿಸಿದ್ದರೂ ಸರ್ಕಾರ ಈ ಬಗ್ಗೆ ಯಾವುದೇ ಗಮನ ಹರಿಸಿಲ್ಲ’ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಈ ಸಂಬಂಧ ವಕೀಲ ರಾಧಾ ನಂದನ್ ಸಲ್ಲಿಸಿರುವ ಪಿಐಎಲ್ಅನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾ ಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಾಧಾನಂದನ್, 2021ರ ಆಗಸ್ಟ್ 8ರಂದು ಹೈಕೋರ್ಟ್ ಹೊರಡಿಸಿರುವ ಆದೇಶದ ಬಗ್ಗೆ ಗಮನ ಸೆಳೆದು, ‘ಕೋತಿಗಳನ್ನು ಸೆರೆ ಹಿಡಿಯುವ ಅನಧಿಕೃತ ಗುಂಪುಗಳು ಹುಟ್ಟಿ ಕೊಂಡಿದೆ. ಆದ್ದರಿಂದ ಅಗತ್ಯ ನಿರ್ದೇಶನ ಗಳನ್ನು ನೀಡಬೇಕು’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನಗರದಲ್ಲಿ ಮಂಗಗಳ ಉಪಟಳ ತಪ್ಪಿಸಲು ಕಾರ್ಯಯೋಜನೆ ರೂಪಿಸುವ ದಿಸೆಯಲ್ಲಿ, 2021ರ ಆಗಸ್ಟ್ 4ರಂದು ಹೊರಡಿಸಿರುವ ಆದೇಶವನ್ನು ಪಾಲಿಸಿ ರುವ ಬಗ್ಗೆ ಒಂದು ವಾರದಲ್ಲಿ ಪ್ರಮಾಣ ಪತ್ರ ಸಲ್ಲಿಸಿ’ ಎಂದು ಬಿಬಿಎಂಪಿ ಮತ್ತು ಅರಣ್ಯ ಇಲಾಖೆಗೆ ತಾಕೀತು ಮಾಡಿ ವಿಚಾರಣೆಯನ್ನು ಆಗಸ್ಟ್ 10ಕ್ಕೆ ಮುಂದೂಡಿತು.
ಬಾನೆಟ್ ಮಂಕಿ
‘ಬೆಂಗಳೂರು ಸುತ್ತಮುತ್ತ ಹೆಚ್ಚಾಗಿ ಕಾಣಿಸಿಕೊಳ್ಳುವ ಅಪರೂಪದ ಬಾನೆಟ್ ಮಂಕಿ (ಉದ್ದ ಬಾಲದ ಕೋತಿ) ತಳಿಯನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಸಂರಕ್ಷಿತ ತಳಿ ಎಂದು ಘೋಷಿಸಲಾಗಿದೆ. ಹಾಗಾಗಿ, ಇವುಗಳ ಉಪಟಳ ತಡೆಯುವುದು ಎಷ್ಟು ಮುಖ್ಯವೋ, ಅವುಗಳ ರಕ್ಷಣೆ ಪುನರ್ವಸತಿ ಕೂಡ ಅಷ್ಟೇ ಮುಖ್ಯವಾಗಿದೆ’ ಎಂಬುದು ಅರ್ಜಿದಾರರ ವಾದ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.