ಬೆಂಗಳೂರು: ಪಟ್ಟೇಗಾರಪಾಳ್ಯದ ಕಟ್ಟಡವೊಂದರಲ್ಲಿ ಸ್ನೇಹಿತ ರಾಬಿನ್ (32) ಎಂಬುವರನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಶಾರೂಕ್ ಖಾನ್ ಅಲಿಯಾಸ್ ತನ್ವೀರ್ ಖಾನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ಪತ್ನಿಯ ಕಣ್ಣೆದುರೇ ರಾಬಿನ್ನನ್ನು ತನ್ವೀರ್ ಕೊಲೆ ಮಾಡಿದ್ದ. ಮೇ 27ರಂದು ಈ ಘಟನೆ ನಡೆದಿತ್ತು.
ಚಿಂದಿ ಆಯುವ ರಾಬಿನ್, ಮೀನಾ ಎಂಬುವರನ್ನು ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ. ತನ್ವೀರ್ ಕೂಡ ಅವರ ಜೊತೆ ಚಿಂದಿ ಆಯುವ ಕೆಲಸ ಮಾಡುತ್ತಿದ್ದ. ಸ್ವಂತ ಮನೆ ಇಲ್ಲದಿದ್ದರಿಂದ ನಿತ್ಯವೂ ಫುಟ್ಪಾತ್ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಎಲ್ಲರೂ ಮಲಗುತ್ತಿದ್ದರು.
ರಾಬಿನ್ ಪತ್ನಿ ಜೊತೆ ಅನೈತಿಕ ಸಂಬಂಧಕ್ಕೆ ತನ್ವೀರ್ ಒತ್ತಾಯಿಸು ತ್ತಿದ್ದ. ಇದೇ ವಿಚಾರಕ್ಕೆ ರಾಬಿನ್ ಮತ್ತು ತನ್ವೀರ್ ನಡುವೆ ಜಗಳವಾಗಿತ್ತು. ಅಷ್ಟಾದರೂ ಆರೋಪಿ, ನಿತ್ಯವೂ ದಂಪತಿ ಮಲಗುತ್ತಿದ್ದ ಜಾಗಕ್ಕೆ ಬಂದು ಕಿರುಕುಳ ನೀಡುತ್ತಿದ್ದ. ಇದೇ ಸಿಟ್ಟಿನಲ್ಲಿ ಕಲ್ಲು ತೆಗೆದುಕೊಂಡು ಬಂದು ರಾಬಿನ್ ತಲೆ ಮೇಲೆ ಎತ್ತಿ ಹಾಕಿ ತನ್ವೀರ್ ಪರಾರಿಯಾಗಿದ್ದ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿ ಆಧರಿಸಿ ವಿಜಯನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.