ADVERTISEMENT

ಬೆಂಗಳೂರು | ಮದ್ಯದ ಪಾರ್ಟಿ ವೇಳೆ ಗಲಾಟೆ: ವ್ಯಕ್ತಿಯ ಕೊಲೆ

​ಪ್ರಜಾವಾಣಿ ವಾರ್ತೆ
Published 10 ಮೇ 2025, 16:02 IST
Last Updated 10 ಮೇ 2025, 16:02 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಮಡಿವಾಳ ಪೊಲೀಸ್‌ ಠಾಣಾ ವ್ಯಾಪ್ತಿಯ ವೆಂಕಟೇಶ್ವರ ಲೇಔಟ್‌ನಲ್ಲಿ ಸ್ನೇಹಿತರು ನಡೆಸುತ್ತಿದ್ದ ಮದ್ಯದ ಪಾರ್ಟಿ ವೇಳೆ ಗಲಾಟೆ ನಡೆದು ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.

ವೆಂಕಟೇಶ್ವರ ಲೇಔಟ್ ನಿವಾಸಿ ಮಾರ್ಟಿನ್ ಸೈಮನ್ (28) ಕೊಲೆಯಾದ ವ್ಯಕ್ತಿ.

ADVERTISEMENT

ಕೃತ್ಯ ಎಸಗಿದ ಇನ್ಸೆಂಟ್ ರಾಜು (26) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

‌ಶುಕ್ರವಾರ ರಾತ್ರಿ ಠಾಣೆ ವ್ಯಾಪ್ತಿಯ ವೆಂಕಟೇಶ್ವರ ಲೇಔಟ್‌ನ 18ನೇ ಕ್ರಾಸ್‌ನ ಮನೆಯೊಂದರಲ್ಲಿ ಮದ್ಯದ ಪಾರ್ಟಿ ನಡೆಯುತ್ತಿತ್ತು. ಆಗ ಗಲಾಟೆ ನಡೆದು ಅದು ವಿಕೋಪಕ್ಕೆ ಹೋಗಿ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ತಮಿಳುನಾಡಿನ ಮಾರ್ಟಿನ್ ಸೈಮನ್ ಅವರು ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬದ ಜತೆಗೆ ವೆಂಕಟೇಶ್ವರ ಲೇಔಟ್‌ನ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಮೂರನೇ ಮಹಡಿಯಲ್ಲಿ ವಾಸವಾಗಿದ್ದರು. ಆರೋಪಿ ಇನ್ಸೆಂಟ್ ರಾಜು, ಖಾಸಗಿ ಬ್ಯಾಂಕ್‌ನಲ್ಲಿ ಸಾಲ ವಸೂಲಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಸೈಮನ್ ವಾಸವಾಗಿದ್ದ ಕಟ್ಟಡದ ನೆಲಮಹಡಿಯ ಮನೆಯಲ್ಲಿ ಆರೋಪಿ ವಾಸವಾಗಿದ್ದ ಎಂದು ಪೊಲೀಸರು ಹೇಳಿದರು.

‘ಒಂದೇ ಕಟ್ಟಡದಲ್ಲಿ ಇಬ್ಬರೂ ವಾಸವಿದ್ದ ಕಾರಣಕ್ಕೆ ಪರಸ್ಪರ ಪರಿಚಯ ಇದ್ದರು. ಸ್ನೇಹಿತರಾಗಿದ್ದರು. ಶುಕ್ರವಾರ ರಾತ್ರಿ ಕಟ್ಟಡದ ಚಾವಣಿಯ ಜಾಗದಲ್ಲಿ ಇಬ್ಬರು ಮದ್ಯದ ಪಾರ್ಟಿ ಮಾಡಲು ಹೋಗಿದ್ದರು. ಮದ್ಯದ ಅಮಲಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಕೋಪಗೊಂಡ ಆರೋಪಿ ಪಕ್ಕದಲ್ಲೇ ಇದ್ದ ಇಟ್ಟಿಗೆಯಿಂದ ಸೈಮನ್‌ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಸೈಮನ್‌ ಸ್ಥಳದಲ್ಲೇ ಮೃತಪಟ್ಟಿದ್ದರು. ಆರೋಪಿ ಪರಾರಿ ಆಗಿದ್ದ’ ಎಂದು ಪೊಲೀಸರು ಹೇಳಿದರು.

ಕೊಲೆ ಪ್ರಕರಣ ದಾಖಲಿಸಿಕೊಂಡು, ಸ್ನೇಹಿತನ ಮನೆಯಲ್ಲಿ ಅಡಗಿದ್ದ ಆರೋಪಿಯನ್ನು ಶನಿವಾರ ಮಧ್ಯಾಹ್ನ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.