ಬೆಂಗಳೂರು: ಕೆಂಗೇರಿಯಲ್ಲಿ ನಡೆದಿದ್ದ ಟೋನಿ ಮತ್ತು ಸೂರಿ ಎಂಬ ರೌಡಿಗಳ ಕೊಲೆ ಪ್ರಕರಣದಲ್ಲಿ ಭಾಗಿ ಆಗಿದ್ದಾನೆ ಎನ್ನಲಾದ ರೌಡಿ ಶಿವು ಅಲಿಯಾಸ್ ಶಿವರಾಜ್ (33) ಎಂಬಾತನೂ ಸೇರಿದಂತೆ ಮೂವರು ರೌಡಿಗಳನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಈತ ತನ್ನ ಸಹಚರರಾದ ಪ್ರಕಾಶ್ನಗರದ ರಫಿ (31) ಹಾಗೂ ಕುರುಬರಹಳ್ಳಿ ಜೆ.ಸಿ. ನಗರದ ಪೈಪ್ಲೈನ್ ಮುಖ್ಯರಸ್ತೆಯ ಶಿವಶಂಕರ್ ಜತೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಇಎಲ್ 2ನೇ ಹಂತದ ಭಾರತ್ನಗರ ಪಾರ್ಕ್ ಬಳಿ, ತನ್ನ ಹಳೇ ವೈರಿ ಹಣಕಾಸು ವ್ಯವಹಾರ ನಡೆಸುವ ಸುಧೀಂದ್ರ ಅವರ ಮೇಲೆ ದಾಳಿ ಮಾಡಿ ಹಣ– ಆಭರಣ ದೋಚಲು ಹೊಂಚು ಹಾಕುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ಎರಡು ಲಾಂಗ್, ಒಂದು ಚಾಕು ವಶಪಡಿಸಿಕೊಳ್ಳಲಾಗಿದೆ. ಶಿವು ಮತ್ತು ಸುಧೀಂದ್ರ ನಡುವೆ ಹಳೇ ದ್ವೇಷವಿತ್ತು. ಹಗೆ ಸಾಧಿಸಲು ಸಮಯ ಕಾಯುತ್ತಿದ್ದ ಮುದ್ದಿನಪಾಳ್ಯ ಮುಖ್ಯರಸ್ತೆ ಸೊಲ್ಲಾಪುರದಮ್ಮ ದೇವಸ್ಥಾನದ ಎದರು ರಸ್ತೆಯ ನಿವಾಸಿ ಶಿವು. ಪ್ರತಿನಿತ್ಯ ಸುಧೀಂದ್ರ ಭಾರತ್ನಗರ ಪಾರ್ಕ್ ಮಾರ್ಗದಲ್ಲಿ ಬರುವ ವಿಷಯ ತಿಳಿದು ಕತ್ತಲಲ್ಲಿ ಸಹಚರರ ಜತೆ ಕಾಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ರೌಡಿ ಶೀಟರ್ ಆದ ಶಿವು ವಿರುದ್ಧ ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ಬ್ಯಾಡರಹಳ್ಳಿ, ಕೆಂಗೇರಿ, ಕುಂಬಳಗೋಡು ಪೊಲೀಸ್ ಠಾಣೆಗಳಲ್ಲಿ ಡಜನ್ ಪ್ರಕರಣಗಳು ದಾಖಲಾಗಿವೆ. ಶಿವು ವಿರುದ್ಧ ಸುಧೀಂದ್ರ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ದ್ವೇಷಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಮತ್ತೊಬ್ಬ ಬಂಧಿತ ಆರೋಪಿ ರಫಿ ಬಸವೇಶ್ವರ ನಗರ ರೌಡಿ ಶೀಟರ್ ಆಗಿದ್ದು ಈತನ ವಿರುದ್ಧವೂ ಕೊಲೆ, ಕೊಲೆಯತ್ನ ಸೇರಿದಂತೆ 10 ಪ್ರಕರಣಗಳು ದಾಖಲಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.