ADVERTISEMENT

ಆಟೊದಲ್ಲಿ ಮೃತದೇಹ ತಂದು ಎಸೆದು ಹೋದರು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 21:56 IST
Last Updated 12 ನವೆಂಬರ್ 2019, 21:56 IST

ಬೆಂಗಳೂರು: ಕ್ಷೌರ ಅಂಗಡಿ ಇಟ್ಟುಕೊಂಡಿದ್ದ ಶ್ರೀನಿವಾಸಮೂರ್ತಿ ಉರ್ಫ್ ಶೇಖರ್ ಎಂಬುವರನ್ನು ಕೊಲೆ ಮಾಡಲಾಗಿದ್ದು, ಅವರ ಮೃತದೇಹವನ್ನು ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಎಸೆದು ಹೋಗಲಾಗಿದೆ.

‘ಚನ್ನಪಟ್ಟಣದ ಶ್ರೀನಿವಾಸ್ ಪೋಷಕರ ಜೊತೆ ಬೆಂಗಳೂರಿಗೆ ಬಂದಿದ್ದರು. ಅವರ ತಂದೆ–ತಾಯಿ ಜಯನಗರದ 9ನೇ ಹಂತದಲ್ಲಿ ನೆಲೆಸಿದ್ದಾರೆ. ಶ್ರೀನಿವಾಸ್ ಮಾತ್ರ ಸದ್ಯ ತಲಘಟ್ಟಪುರದಲ್ಲಿ ನೆಲೆಸಿದ್ದರು’ ಎಂದು ಪೊಲೀಸರು ಹೇಳಿದರು.

‘ಸೋಮವಾರ ರಾತ್ರಿ ಶ್ರೀನಿವಾಸಮೂರ್ತಿ ಅವರ ಮೇಲೆ ಯಾರೋ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ.

ADVERTISEMENT

ದುಷ್ಕರ್ಮಿಗಳೇ ಆಟೊದಲ್ಲಿ ಮೃತದೇಹವನ್ನು ತಂದು ಕುಮಾರಸ್ವಾಮಿ ಲೇಔಟ್ ಸಮೀಪದ ಹೊರವರ್ತುಲ ರಸ್ತೆ ಪಕ್ಕದಲ್ಲಿ ಎಸೆದು ಹೋಗಿದ್ದಾರೆ.ಅದನ್ನು ಕೆಲ ಸ್ಥಳೀಯರು ನೋಡಿದ್ದು, ಆ ಬಗ್ಗೆ ಹೇಳಿಕೆ ನೀಡಿದ್ದಾರೆ’ ಎಂದರು.

ಹಲವು ಆಯಾಮದಲ್ಲಿ ತನಿಖೆ: ‘ಬಾರ್‌ನಲ್ಲಿ ನಡೆದ ಜಗಳದಿಂದಾಗಿ ಈ ಕೊಲೆ ನಡೆದಿರುವ ಅನುಮಾನವಿದೆ. ಆ ಸಂಬಂಧ ಹಲವರನ್ನು ವಿಚಾರಣೆ ನಡೆಸಲಾಗುತ್ತಿದೆ. ಕುಟುಂಬದಲ್ಲಿ ಏನಾದರೂ ಗಲಾಟೆ ಆಗಿತ್ತಾ ಎಂಬುದರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.