ADVERTISEMENT

ಮೊಬೈಲ್‌ಗಾಗಿ ಕೊಲೆ!

ಸ್ನೇಹಿತೆ ಜೊತೆ ಮಾತನಾಡುತ್ತಿದ್ದಾಗ ಘಟನೆ: ಇಬ್ಬರು ಆರೋಪಿಗಳ ಸೆರೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 19:09 IST
Last Updated 20 ಜುಲೈ 2019, 19:09 IST

ಬೆಂಗಳೂರು:‌ ಮೊಬೈಲ್‌ಗಾಗಿ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ, ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸದ್ದಾಂ ಹುಸೇನ್‌ (20) ಮತ್ತು ಮೊಹ್ಮದ್‌ ಸಿದ್ದಿಕ್‌ (19) ಬಂಧಿತರು. ಜುಲೈ 8ರಂದು ರಾತ್ರಿ 9.15ರ ಸುಮಾರಿಗೆ ನಾಗವಾರ ಫ್ಲೈ ಓವರ್‌ ಕೆಳಗಡೆ ಜ್ಞಾನೇಂದ್ರ ರೆಡ್ಡಿ ಎಂಬುವವರನ್ನು ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದರು.

ಅಂದು ತಾನು ಪ್ರೀತಿಸುತ್ತಿದ್ದ ಸ್ನೇಹಿತೆ ನೆಲೆಸಿರುವ ಪೇಯಿಂಗ್‌ ಗೆಸ್ಟ್‌ (ಪಿ.ಜಿ.) ಮುಂಭಾಗದಲ್ಲಿ (ನಾಗವಾರ ಫ್ಲೈ ಓವರ್‌ ಕೆಳಗಡೆ) ನಿಂತು ಜ್ಞಾನೇಂದ್ರ ರೆಡ್ಡಿ, ತಾನಿರುವ ಸ್ಥಳಕ್ಕೆ ಬರುವಂತೆ ಆಕೆಗೆ ಮೊಬೈಲ್‌ ಕರೆ ಮಾಡಿ ಆಹ್ವಾನಿಸಿದ್ದ. ಸ್ನೇಹಿತೆ ಪಿ.ಜಿ.ಯ ಕಿಟಕಿ ಮೂಲಕ ನೋಡುತ್ತಿದ್ದಂತೆ, ಹಿಂಬದಿಯಿಂದ ಬಂದ ಇಬ್ಬರು ದುಷ್ಕರ್ಮಿಗಳು ರೆಡ್ಡಿ ಅವರನ್ನು ಚಾಕು ತೋರಿಸಿ, ಬೆದರಿಸಿ ಮೊಬೈಲ್‌ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.

ADVERTISEMENT

ಇದನ್ನು ಗಮನಿಸಿದ್ದ ಸ್ನೇಹಿತೆ, ತನ್ನ ಗೆಳತಿಯನ್ನು ಜೊತೆಯಲ್ಲಿ ಕರೆದು ಕೊಂಡು ಸ್ಥಳಕ್ಕೆ ಬಂದಿದ್ದರು. ಅಷ್ಟರಲ್ಲಿ ದುಷ್ಕರ್ಮಿಗಳು, ರೆಡ್ಡಿಯ ಎದೆಯ ಭಾಗಕ್ಕೆ ಚಾಕುವಿನಿಂದ ಇರಿದು ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದರು.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಜ್ಞಾನೇಂದ್ರ ಅವರನ್ನುಸ್ನೇಹಿತೆ ಮತ್ತು ಆಕೆಯ ಗೆಳತಿ ಸ್ಥಳೀಯ ಅಂಬೇಡ್ಕರ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಿ ರೆಡ್ಡಿ ಕೊನೆಯುಸಿರೆಳೆದಿದ್ದರು.

ಈ ಘಟನೆಯ ಬಗ್ಗೆ ಸಂಪಿಗೆ ಹಳ್ಳಿ ಪೊಲೀಸ್‌ ಠಾಣೆಗೆ ಸ್ನೇಹಿತೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸುಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.