ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಭಾನುವಾರ ಆಯೋಜಿಸಿದ್ದ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷಾ ಕೇಂದ್ರಗಳಲ್ಲಿ ಅವ್ಯವಸ್ಥೆ ಮನೆಮಾಡಿತ್ತು ಎಂದು ಪೋಷಕರು ದೂರಿದ್ದಾರೆ.
‘ಚಾಮರಾಜಪೇಟೆಯಲ್ಲಿದ್ದ ಪರೀಕ್ಷಾ ಕೇಂದ್ರಗಳಲ್ಲಿ ಮಾಹಿತಿ ನೀಡಲು ಅಗತ್ಯಸಿಬ್ಬಂದಿ ಇರಲಿಲ್ಲ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯೂ ಇರಲಿಲ್ಲ’ ಎಂದು ಪೋಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಗಳನ್ನು ಹಾಡುಗಾರಿಕೆ, ವಾದ್ಯ ಸಂಗೀತ ಮತ್ತು ತಾಳವಾದ್ಯದ ಥಿಯರಿ ಪರೀಕ್ಷೆಗೆ ಚಾಮರಾಜಪೇಟೆ ಜನತಾ ವಿದ್ಯಾಲಯಕ್ಕೆ ಕರೆದುಕೊಂಡು ಹೋಗಿದ್ದೆ. ಪರೀಕ್ಷೆ ಎದುರಿಸಲು ಆ ಕೇಂದ್ರಕ್ಕೆ 450 ವಿದ್ಯಾರ್ಥಿಗಳು ಬಂದಿದ್ದರು. ಅವರನ್ನು ಪೋಷಕರು ಕಾರು–ಬೈಕ್ಗಳಲ್ಲಿ ಕರೆತಂದಿದ್ದರು. ವಾಹನಗಳನ್ನು ನಿಲ್ಲಿಸಲು ಸಹ ಅಲ್ಲಿ ಜಾಗ ಇರಲಿಲ್ಲ. ಇದರಿಂದ ವಾಹನಗಳ ಸಂಚಾರಕ್ಕೂ ಅಡಚಣೆಯಾಯಿತು’ ಎಂದರು.
‘ವಾಹಿನಿಗಳ ರಿಯಾಲಿಟಿ ಷೋಗಳಿಂದಾಗಿ ಮಕ್ಕಳಿಗೆ ಸಂಗೀತ, ನೃತ್ಯ ಕಲಿಸಲು ಪೋಷಕರು ಮುಂದಾಗುತ್ತಿದ್ದಾರೆ. ಹಾಗಾಗಿ ಮಂಡಳಿ ನಡೆಸುವ ಪರೀಕ್ಷೆಗಳನ್ನು ಎದುರಿಸುವವರ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿದೆ. ಆದರೆ, ಪರೀಕ್ಷಾ ಮಂಡಳಿ ವ್ಯವಸ್ಥೆಗಳನ್ನು ಸುಧಾರಿಸುತ್ತಿಲ್ಲ’ ಎಂದು ಮತ್ತೊಬ್ಬ ಪೋಷಕರು ದೂರಿದರು.
‘ಸಂಗೀತದ ಪ್ರಾಯೋಗಿಕ ಪರೀಕ್ಷೆಗಳನ್ನು ಎದುರಿಸಲು ಹಾರ್ಮೋನಿಯಂ, ವೀಣೆಯಂತಹ ಸಂಗೀತ ಪರಿಕರಗಳೊಂದಿಗೆ, ಭರತನಾಟ್ಯ ಪ್ರಾಯೋಗಿಕ ಪರೀಕ್ಷೆಗೆ ಅಲಂಕಾರ ಮಾಡಿಕೊಂಡು ಬರಬೇಕಾಗುತ್ತದೆ. ಮಂಡಳಿಯು ಪ್ರಾಯೋಗಿಕ ಪರೀಕ್ಷೆ ಬೆಳಿಗ್ಗೆ 9ರಿಂದ ಸಂಜೆ 6ರ ವರೆಗೆ ನಡೆಯಲಿದೆ ಎಂದು ತಿಳಿಸುತ್ತದೆ. ಅಲಂಕಾರ ಮಾಡಿಕೊಂಡು, ಅದು ಹಾಳಾಗದಂತೆಪರೀಕ್ಷೆಗಾಗಿ ಕಾಯುತ್ತ ಕೂರುವ ಸ್ಥಿತಿ ಇದೆ. ಪ್ರತಿ ವಿದ್ಯಾರ್ಥಿಗೆ ದಿನದ ನಿರ್ದಿಷ್ಟ ಸಮಯ ನೀಡಿ, ಪರೀಕ್ಷೆ ನಡೆಸಬೇಕು’ ಎಂದು ನೃತ್ಯ–ಸಂಗೀತ ಶಾಲೆಯೊಂದರ ಶಿಕ್ಷಕಿಯೊಬ್ಬರು ಒತ್ತಾಯಿಸಿದರು.
‘ಆನ್ಲೈನ್ನಲ್ಲಿ ಪರೀಕ್ಷೆಗಳಿಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಬೇಕು. ಪ್ರವೇಶ ಪತ್ರಗಳನ್ನು ಒಂದು ತಿಂಗಳ ಮುಂಚೆಯೇ ನೀಡುವ ವ್ಯವಸ್ಥೆ ಮಾಡಬೇಕು’ ಎಂದು ಸಂಗೀತ ಶಿಕ್ಷಕರೊಬ್ಬರು ಮನವಿ ಮಾಡಿದರು.
ಈ ಕುರಿತು ವಿಚಾರಿಸಲು ಪರೀಕ್ಷಾ ಮಂಡಳಿ ನಿರ್ದೇಶಕರಾದ (ಇತರೆ ಪರೀಕ್ಷೆಗಳು) ಕೆ.ಎಸ್.ಮಣಿ ಅವರಿಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.