ಬೆಂಗಳೂರು: ನೂತನ ರಾಷ್ಟ್ರೀಯ ನೀತಿಯ (ಎನ್ಇಪಿ) ಕುರಿತು ಹೆಚ್ಚು ಮಾಹಿತಿ ಒದಗಿಸುವ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ವಿದ್ಯಾಭಾರತಿ ಸರ್ಕಾರೇತರ ಸಂಸ್ಥೆಯು ‘ನನ್ನ ಎನ್ಇಪಿ’ ಕುರಿತು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದೆ.
ಕನ್ನಡವೂ ಸೇರಿದಂತೆ 13 ಭಾಷೆಗಳಲ್ಲಿ ದೇಶದಾದ್ಯಂತ ಈ ಸ್ಪರ್ಧೆ ನಡೆಯಲಿದೆ. ‘ಭಾರತ ಕೇಂದ್ರಿತ ಶಿಕ್ಷಣ’, ‘ಸಮಗ್ರ ಶಿಕ್ಷಣ’, ‘ಜ್ಞಾನಾಧಾರಿತ ಸಮಾಜ’, ‘ಗುಣಮಟ್ಟದ ಶಿಕ್ಷಣ’ ಈ ವಿಷಯಗಳ ಆಧಾರದ ಮೇಲೆ ಸ್ಪರ್ಧೆಗಳು ನಡೆಯಲಿವೆ.
9ರಿಂದ 12ನೆಯ ತರಗತಿಯ ವಿದ್ಯಾರ್ಥಿಗಳಿಗೆ ಭಾಷಣ, ಪ್ರಬಂಧ, ಪ್ರಧಾನಿಗೆ ಪತ್ರ, ಚಿತ್ರಕಲೆ, ಮೀಮ್ಗಳ ರಚನೆ ಕುರಿತು ಸ್ಪರ್ಧೆ ನಡೆಯಲಿದೆ. ಪದವಿಪೂರ್ವ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕಿರುಚಿತ್ರ ನಿರ್ಮಾಣ, ಡಿಜಿಟಲ್ ಪೋಸ್ಟರ್ ರಚನೆ, ಮೀಮ್ ರಚನೆ ಸ್ಪರ್ಧೆ ಇರಲಿದೆ.
ಸಾರ್ವಜನಿಕರಿಗೆ ಕಿರುಚಿತ್ರ ನಿರ್ಮಾಣ, ಟ್ವೀಟ್ ಥ್ರೆಡ್ ರಚನೆ, ಚಿತ್ರಕಲೆ, ಮೀಮ್ ರಚನೆ ಕುರಿತು ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗದ, ಪ್ರತಿ ಭಾಷೆಯಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ ತಲಾ ₹10 ಸಾವಿರ, ₹5 ಸಾವಿರ ಮತ್ತು ₹3 ಸಾವಿರ ನಗದು ಬಹುಮಾನ ಇದೆ. ಅಲ್ಲದೆ, ಪ್ರತಿ ವಿಭಾಗದಲ್ಲಿ ಭಾಗವಹಿಸಿದ ಸಾವಿರ ಜನರಿಗೆ ‘ಭಾಗವಹಿಸುವಿಕೆ ಪ್ರಮಾಣ ಪತ್ರ’ ನೀಡಲಾಗುತ್ತದೆ.
ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನವಾದ ಸೆ.25ರಂದು ಸ್ಪರ್ಧೆಗಳು ಪ್ರಾರಂಭವಾಗಲಿದ್ದು, ಮಹಾತ್ಮ ಗಾಂಧಿ ಜಯಂತಿಯವರೆಗೆ ಅಂದರೆ, ಅ.2ರವರೆಗೆ ನಡೆಯಲಿವೆ. ಅ.5ರಂದು ವಿಜೇತರ ಪಟ್ಟಿ ಘೋಷಿಸಲಾಗುವುದು ಎಂದು ವಿದ್ಯಾಭಾರತಿ ಸಂಸ್ಥೆ ತಿಳಿಸಿದೆ.
ಮಾಹಿತಿಗೆ, www.mynep.in ವೆಬ್ಸೈಟ್ ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.