ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿನ ಬಹುನಿರೀಕ್ಷಿತ ಕೆ.ಆರ್. ಪುರ–ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗಕ್ಕೆ ತಿಂಗಳೊಳಗೆ ಟೆಂಡರ್ ಕರೆಯಲು ಬೆಂಗಳೂರು ಮೆಟ್ರೊ ರೈಲು ನಿಗಮ ಸಜ್ಜಾಗಿದೆ.
‘ಸಿಲ್ಕ್ ಬೋರ್ಡ್ನಿಂದ ಕೆ.ಆರ್. ಪುರದವರೆಗೆ ಅಥವಾ ಹೊರ ವರ್ತುಲ ರಸ್ತೆಯ (ಒಆರ್ಆರ್) ಮಾರ್ಗಕ್ಕೆ (2ಎ) ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದ್ದು, ಒಂದು ವಾರದೊಳಗೆ ಕಾರ್ಯಾದೇಶ ನೀಡಲಾಗುತ್ತದೆ. ಅದೇ ರೀತಿ, ಕೆ.ಆರ್. ಪುರ–ವಿಮಾನ ನಿಲ್ದಾಣ ಮಾರ್ಗಕ್ಕೆ (2ಬಿ) ತಿಂಗಳೊಳಗೆ ಟೆಂಡರ್ ಆಹ್ವಾನಿಸಲಾಗುವುದು’ಎಂದು ಬಿಎಂಆರ್ಸಿಎಲ್ ಭೂಸ್ವಾಧೀನ ವಿಭಾಗದ ಪ್ರಧಾನ ವ್ಯವಸ್ಥಾಪಕ ಚನ್ನಪ್ಪಗೌಡರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಒಆರ್ಆರ್ ಮಾರ್ಗದ ಭೂಸ್ವಾಧೀನ ಕಾರ್ಯ ಪೂರ್ಣಗೊಂಡಿದೆ. ವಿಮಾನ ನಿಲ್ದಾಣ ಮಾರ್ಗದಲ್ಲಿ ಶೇ 90ರಷ್ಟು ಭೂಸ್ವಾಧೀನ ಕಾರ್ಯ ಪೂರ್ಣಗೊಂಡಿದ್ದು, ಕೆಲವು ಅಂಗಡಿಗಳ ಸ್ಥಳಾಂತರ ಕಾರ್ಯ ಬಾಕಿ ಇದೆ. ಲಾಕ್ಡೌನ್ ಇರುವುದರಿಂದ ಈ ಕಾರ್ಯ ಸ್ವಲ್ಪ ನಿಧಾನವಾಗಿದೆ. ಕೆಲವೇ ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳಿಸಿ, ಟೆಂಡರ್ ಆಹ್ವಾನಿಸಲಾಗುವುದು’ ಎಂದು ಹೇಳಿದರು.
‘ಕೆಲವು ಕಟ್ಟಡಗಳ ಮಾಲೀಕರು, ಬಾಡಿಗೆದಾರರು ಸ್ವಲ್ಪ ಸಮಯ ಕೇಳಿದ್ದಾರೆ. ಸೋಂಕು ಹರಡುತ್ತಿರುವುದರಿಂದ ಈ ವೇಳೆ ಸ್ಥಳಾಂತರವಾಗಲು ಕಷ್ಟವಾಗುತ್ತದೆ ಎಂದು ಕೋರಿದ್ದಾರೆ. ಅವರಿಗೆ ಕಾಲಾವಕಾಶ ಕೊಡಲಾಗಿದೆ’ ಎಂದೂ ಹೇಳಿದರು.
ಈ ಎರಡೂ ಮಾರ್ಗ ಸೇರಿ ಒಟ್ಟು 3.13 ಲಕ್ಷ ಚದರ ಮೀಟರ್ನಷ್ಟು ಭೂಮಿ ಅಗತ್ಯವಿದೆ. ಈ ಪೈಕಿ ಈಗಾಗಲೇ 2.71 ಲಕ್ಷ ಚದರ ಮೀಟರ್ನಷ್ಟು ಭೂಮಿ ವಶಪಡಿಸಿಕೊಳ್ಳಲಾಗಿದ್ದು, ಎಂಜಿನಿಯರಿಂಗ್ ವಿಭಾಗಕ್ಕೆ ಇದನ್ನು ಹಸ್ತಾಂತರಿಸಲಾಗಿದೆ. ಇನ್ನು, ಶೇ 10ರಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ.
₹8 ಸಾವಿರ ಕೋಟಿ:
ಈ ಎರಡೂ ಮಾರ್ಗಕ್ಕಾಗಿ ವಶಪಡಿಸಿಕೊಂಡಿರುವ ಭೂಮಿಗೆ ₹8 ಸಾವಿರ ಕೋಟಿ ಪರಿಹಾರ ನೀಡಲಾಗಿದೆ. ಈವರೆಗೆ ಒಟ್ಟು 3,006 ಕಟ್ಟಡ ಅಥವಾ ಆಸ್ತಿಗಳನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ.
₹14,788 ಕೋಟಿ ಯೋಜನೆ
ಕೇಂದ್ರ ಸರ್ಕಾರ ಈ 2ಎ ಮತ್ತು 2ಬಿ ಮಾರ್ಗಕ್ಕೆ ಕಳೆದ ತಿಂಗಳು ಅನುಮೋದನೆ ನೀಡಿದೆ. ₹14,788 ಕೋಟಿ ವೆಚ್ಚದಲ್ಲಿ 58.19 ಕಿ.ಮೀ. ಉದ್ದದ ಈ ಮಾರ್ಗ ನಿರ್ಮಾಣವಾಗಲಿದೆ.
ಸಿಲ್ಕ್ಬೋರ್ಡ್ನಿಂದ ಕೆ.ಆರ್. ಪುರ, ನಾಗವಾರ ಮತ್ತು ಹೆಬ್ಬಾಳ ಮೂಲಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ನಿರ್ಮಾಣವಾಗುವ ಈ ಮಾರ್ಗದಲ್ಲಿ 30 ನಿಲ್ದಾಣಗಳು ತಲೆ ಎತ್ತಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.