ADVERTISEMENT

‘ನಂದಿನಿ‘ಗೆ ಹೆಚ್ಚಿದ ಬೇಡಿಕೆ:ದೆಹಲಿಯಲ್ಲಿ ನಿತ್ಯ 11 ಸಾವಿರ ಲೀಟರ್‌ ಹಾಲು ಮಾರಾಟ

ಗಾಣಧಾಳು ಶ್ರೀಕಂಠ
Published 1 ಡಿಸೆಂಬರ್ 2024, 23:30 IST
Last Updated 1 ಡಿಸೆಂಬರ್ 2024, 23:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ನಂದಿನಿ ಹಾಲಿನ ಮಾರಾಟದಲ್ಲಿ ಏರಿಕೆ ಕಂಡಿದ್ದು, ಕಡಿಮೆ ಅವಧಿಯಲ್ಲೇ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುತ್ತಿದೆ.

ರಾಜ್ಯದ ಆಚೆಗೂ ಹಾಲಿನ ಮಾರುಕಟ್ಟೆ ವಿಸ್ತರಿಸಿರುವ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು (ಕೆಎಂಎಫ್‌), ಇತ್ತೀಚೆಗೆ ದೆಹಲಿಯಲ್ಲಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ (ಮನ್‌ಮೂಲ್) ಜತೆಯಾಗಿ ವಿವಿಧ ಶ್ರೇಣಿಯ ನಂದಿನಿ ಹಾಲಿನ ಮಾರಾಟವನ್ನು ಆರಂಭಿಸಿದೆ. ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಹಾಲನ್ನು ಪೂರೈಸುವ ಮೂಲಕ, ಪ್ರಸ್ತುತ ಮಾರುಕಟ್ಟೆಯಲ್ಲಿರುವ ವಿವಿಧ ಕಂಪನಿಗಳ ಹಾಲಿಗೆ ಸ್ಪರ್ಧೆ ನೀಡುತ್ತಿದೆ.

‘ಪ್ರಸ್ತುತ ಗುಜರಾತ್‌ನ ‘ಅಮೂಲ್‌’, ಮದರ್‌ ಡೇರಿ ಸೇರಿ ವಿವಿಧ ಕಂಪನಿಗಳ ಹಾಲು ದೆಹಲಿ ಮಾರುಕಟ್ಟೆಯಲ್ಲಿದೆ. ರುಚಿ, ಗುಣಮಟ್ಟದ ಕಾರಣದಿಂದಾಗಿ ನಂದಿನಿ ಹಾಲು ದೆಹಲಿಯ ಗ್ರಾಹಕರಿಗೆ ಇಷ್ಟವಾಗಿದೆ’ ಎಂದು ಕೆಎಂಎಫ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಪ್ರತಿ ನಿತ್ಯ 10 ಸಾವಿರದಿಂದ 11 ಸಾವಿರ ಲೀಟರ್‌ ಹಾಲು ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ಬೇರೆ ಕಂಪನಿಗಳಿಂದ ಕಠಿಣ ಸ್ಪರ್ಧೆ ಇದೆ. ಮಾರಾಟಗಾರರನ್ನು ನಿಯೋಜಿಸಿ, ಮಾರುಕಟ್ಟೆ ವಿಸ್ತರಿಸಬೇಕಿದೆ. ಸದ್ಯಕ್ಕೆ ಹಾಲನ್ನು ಪೂರೈಕೆ ಮಾಡುತ್ತಿದ್ದೇವೆ. ಮುಂದೆ ಎಲ್ಲ ಉತ್ಪನ್ನಗಳನ್ನು ದೆಹಲಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತದೆ’ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಇಲ್ಲಿರುವಂತೆಯೇ ದೆಹಲಿಯಲ್ಲೂ ಹಸಿರು, ಕಿತ್ತಳೆ, ನೀಲಿ, ನೇರಳೆ ಬಣ್ಣದ ಪ್ಯಾಕೆಟ್‌ಗಳಲ್ಲಿ ವಿವಿಧ ಶ್ರೇಣಿಯ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಮುಂದೆ, ಮೊಸರು, ತುಪ್ಪ ಸೇರಿದಂತೆ ನಂದಿನಿಯ ಬೇರೆ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದೆಹಲಿ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆದಿದೆ. ಈ ಸಂಬಂಧ, ಮಾರುಕಟ್ಟೆ ಸಮೀಕ್ಷೆಯನ್ನೂ ನಡೆಸಲಾಗುತ್ತಿದೆ.

‘ನಂದಿನಿ ಹಾಲಿನ ಗುಣಮಟ್ಟದಿಂದಾಗಿ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ನಮ್ಮಲ್ಲಿದ್ದಂತೆ ನೀಲಿ–ಬಿಳಿ ಬಣ್ಣದ ಪ್ಯಾಕೆಟ್‌ ಹಾಲಿಗೆ ಅಲ್ಲಿ ಅಷ್ಟಾಗಿ ಬೇಡಿಕೆ ಇಲ್ಲ. ಕಿತ್ತಳೆ ಬಣ್ಣದ ಪ್ಯಾಕೆಟ್‌ ಹಾಲಿಗೆ ಹೆಚ್ಚು ಬೇಡಿಕೆ ಇದೆ. ಟೋನ್ಡ್‌ ಹಾಲಿಗಿಂತ, ಡಬ್ಬಲ್‌ ಟೋನ್ಡ್‌ ಹಾಲನ್ನು ಜನರು ಹೆಚ್ಚು ಇಷ್ಟಪಡುತ್ತಿದ್ದಾರೆ’ ಎಂದು ಜಗದೀಶ್ ವಿವರಿಸಿದರು.

ಮಾರುಕಟ್ಟೆಯಲ್ಲಿನ ಬೇಡಿಕೆಗೆ ತಕ್ಕಂತೆ ವಿವಿಧ ಪ್ರಮಾಣಗಳಲ್ಲಿ ಹಾಲಿನ ಪ್ಯಾಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಹಸುವಿನ ಹಾಲಿಗೆ ಹೆಚ್ಚು ಬೇಡಿಕೆ ಇದೆ ಎಂದು ತಿಳಿಸಿದರು.

ನವೆಂಬ‌ರ್‌ 11ರಂದು ದೆಹಲಿಯಲ್ಲಿ ನಂದಿನಿ ಹಾಲು ಮಾರಾಟಕ್ಕೆ ಚಾಲನೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ದೆಹಲಿಗೆ ಆರಂಭಿಕ ಹಂತದಲ್ಲಿ 2.5 ಲಕ್ಷ ಲೀಟರ್‌ ಹಾಲು ಪೂರೈಸಲು ಯೋಜನೆ ರೂಪಿಸಲಾಗಿದೆ. ಆರು ತಿಂಗಳೊಳಗೆ 5 ಲಕ್ಷ ಲೀಟರ್‌ಗೆ ಹೆಚ್ಚಿಸುವ ಗುರಿ ಇದೆ’ ಎಂದು ಹೇಳಿದ್ದರು.

ಸಾಂದರ್ಭಿಕ ಚಿತ್ರ

ಗ್ರಾಹಕರ ಬೇಡಿಕೆ ಪ್ರತಿಕ್ರಿಯೆ ಆಧರಿಸಿ ದೆಹಲಿಯ ನಂತರ ಉತ್ತರ ಭಾರತದ ಬೇರೆ ರಾಜ್ಯಗಳಿಗೂ ಹಾಲಿನ ಮಾರಾಟ ವಿಸ್ತರಿಸುವ ಯೋಜನೆ ಇದೆ ಕೆ.ಎಂ.ಜಗದೀಶ್ ವ್ಯವಸ್ಥಾಪಕ ನಿರ್ದೇಶಕ ಕೆಎಂಎಫ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.