ದಾಬಸ್ಪೇಟೆ: ತಳಿರು ತೋರಣ, ಹೂ ಹಾಗೂ ರಂಗೋಲಿಗಳಿಂದ ಅಲಂಕೃತಗೊಂಡ ಮಾರಮ್ಮನ ಗುಡಿ. ಬಣ್ಣಬಣ್ಣದ ಸೀರೆಯುಟ್ಟ ಗೃಹಿಣಿಯರು, ತಂಬಿಟ್ಟಿನ ಘಮ, ತಮಟೆ ವಾದ್ಯಕ್ಕೆ ಯುವಕರು, ಪುಟಾಣಿಗಳ ನರ್ತನ, ಖುಷಿಯ ಹೊನಲು.
ಇವು ನರಸೀಪುರದ ಊರಹಬ್ಬ ಹಾಗೂ ಮಾರಮ್ಮ ಜಾತ್ರೆಯ ಸಂಭ್ರಮವನ್ನು ಹೆಚ್ಚಿಸಿದ್ದವು.
ಮಾರಮ್ಮನಿಗೆ ಪುಣ್ಯಾಹ್ನ ಹಾಗೂ ವಿವಿಧ ಪೂಜಾ ಕಾರ್ಯಗಳು ನಡೆದವು. ಆಂಜನೇಯ ಸ್ವಾಮಿಗೆ ಸಂಜೆ ಬೆಲ್ಲದ ಆರತಿ ಮಾಡಲಾಯಿತು. ದೇವಿಯ ತವರು ನೆಲವಾದ ಸಾಲಹಟ್ಟಿಗೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಲಾಯಿತು. ನಂತರ ದೇವರಹಟ್ಟಿ ಪಾಳ್ಯ, ಬೆಟ್ಟದ ಹೊಸಹಳ್ಳಿ, ನರಸೀಪುರ ತೋಪಿನ ಮನೆಗಳಿಗೆ ತೆಗೆದುಕೊಂಡು ಹೋಗಿ ಪೂಜೆ ಮಾಡಿಸಲಾಯಿತು.
ಹೆಂಗಳೆಯರುಹೊಂಬಾಳೆ, ಕನಕಾಂಬರ, ಮಲ್ಲಿಗೆ, ಗುಲಾಬಿ ಹೂಗಳಿಂದ ಸಿಂಗಾರ ಮಾಡಿದ ಆರತಿ ತಂಬಿಟ್ಟು ಹೊತ್ತು ಸಾಗಿದರು. ಹರಕೆ ಹೊತ್ತವರುದೇವಾಲಯ ಮುಂಭಾಗದ ಕೊಂಡದಲ್ಲಿ ದಾಟಿ ದೇವಿಗೆ ಆರತಿ ಬೆಳಗಿದರು.ಮೆರವಣಿಗೆ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
'ದೇವಿಯು ಸಾಂಕ್ರಾಮಿಕ ರೋಗಗಳಿಂದ ಕಾಪಾಡುವುದರೊಂದಿಗೆ, ಉತ್ತಮ ಮಳೆ–ಬೆಳೆಗೆ ಸಹಕರಿಸುತ್ತಾಳೆ ಎಂಬ ನಂಬಿಕೆಯಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಜಾತ್ರೆ ಮಾಡುತ್ತೇವೆ' ಎಂದು ತಿಳಿಸಿದರು ಸ್ಥಳೀಯರಾದ ಪ್ರವೀಣ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.