ಕ್ಯಾನ್ಸರ್ (ಸಾಂದರ್ಭಿಕ ಚಿತ್ರ)
ಬೆಂಗಳೂರು: ‘ಅಂಗವನ್ನು ತೆಗೆಯದೇ ಸುಧಾರಿತ ಚಿಕಿತ್ಸೆ ಮೂಲಕ ಮೂಳೆ ಕ್ಯಾನ್ಸರ್ ಗುಣಪಡಿಸಲು ಸಾಧ್ಯ. ಕಳೆದ ಏಳು ವರ್ಷಗಳಲ್ಲಿ ಒಂದು ಸಾವಿರಕ್ಕೂ ಅಧಿಕ ರೋಗಿಗಳಿಗೆ ಈ ಚಿಕಿತ್ಸೆಯ ಮೂಲಕ ಮೂಳೆ ಕ್ಯಾನ್ಸರ್ ಗುಣಪಡಿಸಲಾಗಿದೆ’ ಎಂದು ನಾರಾಯಣ ಹೆಲ್ತ್ ಸಿಟಿಯ ಆರ್ಥೊ - ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಸುಮನ್ ಬೈರೇಗೌಡ ತಿಳಿಸಿದರು.
ಬುಧವಾರ ಸುದ್ದಿಗೋಷ್ಟಿಯಲ್ಲಿ ಚಿಕಿತ್ಸೆ ಕುರಿತು ಮಾಹಿತಿ ಹಂಚಿಕೊಂಡ ಅವರು, ‘ಮೂಳೆ ಕ್ಯಾನ್ಸರ್ ಬಂದರೆ ಅಂಗವನ್ನೇ ತೆಗೆದು ಹಾಕುವ ಪರಿಸ್ಥಿತಿ ಇತ್ತು. ಈಗ ನಮ್ಮ ತಜ್ಞ ವೈದ್ಯರ ತಂಡ ಸುಧಾರಿತ ಚಿಕಿತ್ಸೆಯೊಂದಿಗೆ ಅಂಗವನ್ನು ಉಳಿಸಿಕೊಂಡು ಕ್ಯಾನ್ಸರ್ ರೋಗವನ್ನು ಗುಣಪಡಿಸುತ್ತಿದೆ’ ಎಂದರು.
‘ಕಿಮೊ, ರೇಡಿಯೊ ಥೆರಪಿಗಳ ಮೂಲಕ ಕ್ಯಾನ್ಸರ್ ತಗುಲಿರುವ ಭಾಗಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಕೆಲವೊಮ್ಮೆ ಆ ಭಾಗವನ್ನೇ ಶಸ್ತ್ರಚಿಕಿತ್ಸೆಯಿಂದ ಹೊರ ತೆಗೆದು ಚಿಕಿತ್ಸೆ ನೀಡಿ ಗುಣಪಡಿಸಿ ಮರು ಜೋಡಿಸಲಾಗುತ್ತದೆ. ಇನ್ನೂ ಕೆಲವು ಪ್ರಕರಣಗಳಲ್ಲಿ (ಜಾಯಿಂಟ್ಗಳಿಗೆ) ಲೋಹದ ಪ್ಲೇಟ್ಗಳ ಜೋಡಣೆ ಮೂಲಕ ಚಿಕಿತ್ಸೆ ನೀಡಲಾಗಿದೆ. ಹೀಗೆ ಚಿಕಿತ್ಸೆ ಪಡೆದಿರುವವರು ಸಂಪೂರ್ಣ ಗುಣಮುಖರಾಗಿದ್ದಾರೆ’ ಎಂದು ಚಿಕಿತ್ಸಾ ವಿಧಾನವನ್ನು ವಿವರಿಸಿದರು.
‘ನಾರಾಯಣ ಹೆಲ್ತ್ ಸಿಟಿಯಲ್ಲಿ 2017 ರಿಂದ ಈ ಚಿಕಿತ್ಸೆ ನೀಡುತ್ತಿದ್ದೇವೆ. ಭಾರತ, ಬಾಂಗ್ಲಾದೇಶ, ಆಫ್ರಿಕಾ ಖಂಡದ ದೇಶಗಳು, ಮಧ್ಯಪ್ರಾಚ್ಯ ರಾಷ್ಟ್ರಗಳ ಮೂಳೆ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ್ದೇವೆ’ ಎಂದು ತಿಳಿಸಿದರು.
ಅಂಗ ರಕ್ಷಣಾ ಚಿಕಿತ್ಸೆ ಪಡೆದು ಮೂಳೆ ಕ್ಯಾನ್ಸರ್ನಿಂದ ಗುಣಮುಖರಾಗಿರುವ ಕೊಡಗಿನ ಪ್ರತೀಕ್ಷಾ, ಮೈಸೂರಿನ ಕೇತ್ ಅವರು ತಮ್ಮ ಅನುಭವ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.