ಬೆಂಗಳೂರು: ‘ನರವಿಜ್ಞಾನ ವಿಭಾಗವು 20 ವರ್ಷಗಳ ಅವಧಿಯಲ್ಲಿ ಲಕ್ಷಕ್ಕೂ ಅಧಿಕ ನರರೋಗ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ’ ಎಂದು ನಾರಾಯಣ ಹೆಲ್ತ್ ಸಿಟಿ ತಿಳಿಸಿದೆ.
ನಗರದಲ್ಲಿ ಆಸ್ಪತ್ರೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ಸಂಸ್ಥೆಯ ವೈದ್ಯರು, ‘ನಿಯಮಿತವಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ಚಿಕಿತ್ಸೆ ಒದಗಿಸಲಾಗುತ್ತಿದೆ. ಇದರಿಂದಾಗಿ ರೋಗಿಗಳಿಗೂ ಇಲ್ಲಿನ ವೈದ್ಯಕೀಯ ವ್ಯವಸ್ಥೆ ಮೇಲೆ ವಿಶ್ವಾಸ ಮೂಡಿದೆ. ಪರಿಣಾಮ ಎರಡು ದಶಕಗಳ ಅವಧಿಯಲ್ಲಿ ಇಷ್ಟೊಂದು ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಪಾರ್ಶ್ವವಾಯು ಸೇರಿ ವಿವಿಧ ಸಂಕೀರ್ಣ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೂ ನಮ್ಮ ವೈದ್ಯಕೀಯ ತಂಡವು ಹೊಸ ಬದುಕು ನೀಡಿದೆ’ ಎಂದರು.
ಸಂಸ್ಥೆಯ ನರವಿಜ್ಞಾನ ವಿಭಾಗದ ಹಿರಿಯ ಸಲಹೆಗಾರ ಡಾ. ವಿಕ್ರಮ್ ಹುಡೇದ್, ‘ಸರಾಸರಿ ನಾಲ್ಕು ಜನರಲ್ಲಿ ಒಬ್ಬರಿಗೆ ತಮ್ಮ ಜೀವನದಲ್ಲಿ ಪಾರ್ಶ್ವವಾಯು (ಸ್ಟ್ರೋಕ್) ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಐವತ್ತು ಜನರಲ್ಲಿ ಒಬ್ಬರಿಗೆ ಮಿದುಳಿನಲ್ಲಿ ಕಂಡುಬರುವ ‘ಅನ್ಯೂರಿಸಮ್’ ಎಂಬ ಸಮಸ್ಯೆ ಇರುತ್ತದೆ. ಇದರ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡರೂ, ತಕ್ಷಣ ಸಿಟಿ ಅಥವಾ ಎಂಆರ್ ಆಂಜಿಯೋಗ್ರಫಿ ಮಾಡಿಸುವುದು ಸೂಕ್ತ. ನಮ್ಮಲ್ಲಿನ ತಜ್ಞ ವೈದ್ಯರ ತಂಡವು ಸಂಕೀರ್ಣ ಪ್ರಕರಣಗಳನ್ನೂ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದೆ’ ಎಂದು ಹೇಳಿದರು.
ವಿವಿಧ ನರ ಸಂಬಂಧಿ ಅನಾರೋಗ್ಯ ಸಮಸ್ಯೆಗಳಿಗೆ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡವರು ತಮ್ಮ ಅನುಭವವನ್ನು ಇದೇ ವೇಳೆ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.