ಬೆಂಗಳೂರು: ‘ಕೊರೊನಾ ಸೋಂಕು ಕಾರಣದಿಂದ ಕಷ್ಟಕ್ಕೆ ಸಿಲುಕಿರುವ ಭಾರತ ಆರ್ಥಿಕವಾಗಿ ಮೇಲೆ ಬರಬೇಕಿದ್ದರೆ ತಲಾ ಜಿಡಿಪಿ ಹೆಚ್ಚಳ ಆಗಲೇಬೇಕು’ ಎಂದುಇನ್ಫೊಸಿಸ್ ಸಹ ಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ಅಭಿಪ್ರಾಯಪಟ್ಟರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಆಯೋಜಿಸಿದ್ದ ಆನ್ಲೈನ್ ಡೈಲಾಗ್ ಕೆಫೆಯಲ್ಲಿ ಮಾತನಾಡಿದ ಅವರು, ‘ನಮ್ಮ ದೇಶದಲ್ಲೂ ಜಿಡಿಪಿ ಹೆಚ್ಚಳ ಆಗಬೇಕೆಂದರೆಯುವ ಸಮೂಹ ಕಠಿಣ ಪರಿಶ್ರಮ ವಹಿಸುವ ಅಗತ್ಯವಿದೆ’ ಎಂದರು.
‘ಕೊರೊನಾ ಸೋಂಕಿನ ಕಾರಣಕ್ಕೆ ಡಿಜಿಟಲ್ ಸೇವೆಯನ್ನು ಜನರು ಹೆಚ್ಚು ಅವಲಂಬಿಸುತ್ತಿದ್ದಾರೆ. ಇನ್ನಷ್ಟು ಸೇವೆ ಆನ್ಲೈನ್ನಲ್ಲೇ ಲಭ್ಯವಾಗುವಂತೆ ಮಾಡುವ ಜವಾಬ್ದಾರಿಯೂ ಯುವಜನರ ಮೇಲಿದೆ. ಕೃಷಿ, ಕೈಗಾರಿಕೆ, ಶಿಕ್ಷಣ ಕ್ಷೇತ್ರಕ್ಕೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಇನ್ನಷ್ಟು ಕೊಡುಗೆಗಳನ್ನು ನೀಡಬೇಕು’ ಎಂದು ಹೇಳಿದರು.
‘ಆನ್ಲೈನ್ನಲ್ಲಿ ವಸ್ತುಗಳನ್ನು ಖರೀದಿ ಮಾಡುವುದು ಹೇಗೆ, ವೈದ್ಯರನ್ನು ಸಂಪರ್ಕ ಮಾಡುವುದು ಹೇಗೆ, ಟೆಲಿಮೆಡಿಸಿನ್ ಸೌಲಭ್ಯ ಪಡೆದುಕೊಳ್ಳುವ ಬಗ್ಗೆ ಗ್ರಾಮೀಣ ಮತ್ತು ಸಣ್ಣ ನಗರಗಳ ಹಿರಿಯರಿಗೆ ತಿಳಿವಳಿಕೆ ಕೊರತೆ ಇರುತ್ತದೆ. ತಿಳಿಸಿಕೊಡುವ ಕೆಲಸವನ್ನು ಯುವಕರು ಮಾಡಬೇಕು’ ಎಂದರು.
‘ಕೊರೊನಾ ಸೋಂಕಿನಿಂದ ದೇಶವನ್ನು ಪಾರು ಮಾಡಲು ಸರ್ಕಾರ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಅವುಗಳನ್ನು ಜನ ಚಾಚೂ ತಪ್ಪದೆ ಪಾಲಿಸಬೇಕು’ ಎಂದು ಸಲಹೆ ನೀಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಮಾತನಾಡಿ, ‘ನಾರಾಯಣಮೂರ್ತಿ ಅವರೂ ನಾಲ್ಕು ವರ್ಷಗಳ ಕಾಲ ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ಇದ್ದರು ಎಂಬುದು ಹೆಮ್ಮೆಯ ವಿಷಯ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.