ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಾಹಿತಿಗಳು, ರಂಗಕರ್ಮಿಗಳು ಹಾಗೂ ಹೋರಾಟ
ಗಾರರ ಜೊತೆಗೆ ಭಾನುವಾರ ಸಂವಾದ ನಡೆಸಿದರು.
ನಟ ‘ಮುಖ್ಯಮಂತ್ರಿ’ ಚಂದ್ರು, ‘ಪ್ರಾದೇಶಿಕ ಭಾಷೆಗಳನ್ನು ಒಳಗೊಂಡ ರಾಷ್ಟ್ರೀಯ ಉದ್ಯೋಗ ನೀತಿ ತಂದು,ಎಲ್ಲ ಪರೀಕ್ಷೆಗಳನ್ನು ರಾಜ್ಯಭಾಷೆಗಳಲ್ಲಿ ನಡೆಸುವ ಮೂಲಕ ಭಾಷೆಯೇ ಬದುಕು ರೂಪಿಸುವಂತಹ ಕೆಲಸವನ್ನು ಕಾಂಗ್ರೆಸ್ ಮಾಡಬೇಕು’ ಎಂದು ಸಲಹೆ ನೀಡಿದರು.
‘ಗ್ರಾಮೀಣ ಬ್ಯಾಂಕುಗಳಿಗೆ ನಡೆಯುವ ನೇಮಕಾತಿ ಪರೀಕ್ಷೆಗಳಲ್ಲಿ ಭಾರತೀಯ ಭಾಷೆಗೆ ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ಆದರೆ, ಮೊದಲು ಮುಖ್ಯ ಪರೀಕ್ಷೆಯನ್ನು ಹಿಂದಿ ಅಥವಾ ಇಂಗ್ಲಿಷ್ನಲ್ಲಿಯೇ ಬರೆಯಬೇಕಾಗಿದೆ.
ಉತ್ತೀರ್ಣರಾದ ನಂತರವೇ ಮಾತೃಭಾಷೆಯಲ್ಲಿ(ಕನ್ನಡ) ಪರೀಕ್ಷೆ ಬರೆಯಬಹುದು. ಆದರೆ, ಮೊದಲ ಪರೀಕ್ಷೆ
ಯಲ್ಲೇ ಉತ್ತೀರ್ಣವಾಗಲು ಸ್ಥಳೀಯ ಅಭ್ಯರ್ಥಿಗಳಿಗೆ ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು. ಬನವಾಸಿ ಬಳಗದ ಅರುಣ್ ಜಾವಗಲ್, ‘ಸಂವಿಧಾನದ 343ರಿಂದ 351ನೇ ವಿಧಿಗಳು ಹಿಂದಿಯ ಬಳಕೆ ಮತ್ತು ಬೋಧನೆಗೆ ಸಂಬಂಧಿಸಿವೆ. ದೇಶದಲ್ಲಿ ಹಿಂದಿ ಹೇರಿಕೆ ಪ್ರಬಲವಾಗಲು ಕಾರಣವಾಗಿರುವ ಅಂಶಗಳಿವು. ಈ ವಿಧಿಗಳಿಗೆ ತಿದ್ದುಪಡಿ ತರುವ ಅಥವಾ ರದ್ದು ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಬೇಕು’ ಎಂದು ಸಲಹೆ ನೀಡಿದರು.
‘ಹೈಕೋರ್ಟ್ನಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡಬೇಕು’ ಎಂದು ಗೌತಮ್ ಹೆಗಡೆ ಹೇಳಿದರು. ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ‘ದೇಶದಲ್ಲಿ ಹಿಂದಿ ಆಕ್ರಮಣ ತಡೆಗಟ್ಟಲು ಗೋಕಾಕ್ ಮಾದರಿ ಚಳವಳಿ ಅಗತ್ಯವಿದೆ’ ಎಂದರು. ವಿ.ಪಿ. ಮೆನನ್, ‘ಈ ಬಾರಿ ಕೇಂದ್ರದಲ್ಲಿ ಆಯ್ಕೆಯಾಗಿರುವ ಸಂಸದರ ಪೈಕಿ ಶೇ 43ರಷ್ಟು ಜನ ಅಪರಾಧ ಹಿನ್ನೆಲೆಯುಳ್ಳವರು. ಮುಂದೆ ಇಂಥವರಿಗೆ ಟಿಕೆಟ್ ನೀಡಬಾರದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.