ಬೆಂಗಳೂರು: ರಾಜ್ಯದ ಹಿಂದೂಸ್ತಾನಿ ಸಂಗೀತ ಗಾಯಕಿ ಲಲಿತ್ ಜೆ.ರಾವ್, ಕರ್ನಾಟಕ ಸಂಗೀತ ವಿದುಷಿ ಎಂ.ಎಸ್.ಶೀಲಾ ಮತ್ತು ಕರ್ನಾಟಕ ಸಂಗೀತ ವೀಣಾ ವಾದಕಿ ಡಾ. ಸುಮಾ ಸುಧೀಂದ್ರ ಸೇರಿದಂತೆ
ರಾಷ್ಟ್ರದ 42 ಕಲಾವಿದರಿಗೆ ರಾಷ್ಟ್ರೀಯ ಸಂಗೀತ ನಾಟಕ ಅಕಾಡೆಮಿಯು 2017ನೇ ಸಾಲಿನ ಪ್ರಶಸ್ತಿ ಪ್ರಕಟಿಸಿದೆ.
ಸಂಗೀತ, ನೃತ್ಯ, ನಾಟಕ, ಜನಪದ ಸಂಗೀತ, ಪ್ರದರ್ಶನ ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ತಲಾ ₹1 ಲಕ್ಷ ನಗದು ಮತ್ತು ತಾಮ್ರಪತ್ರ ಒಳಗೊಂಡಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅಕಾಡೆಮಿ ಕಾರ್ಯದರ್ಶಿ ರೀಟಾ ಸ್ವಾಮಿ ಚೌಧರಿ ತಿಳಿಸಿದ್ದಾರೆ.
ಮೊದಲ ಗೌರವಕೇಂದ್ರ ಸಂಗೀತ ಮತ್ತುನಾಟಕ ಅಕಾಡೆಮಿಯ ಪ್ರಶಸ್ತಿ ಪಡೆದ ರಾಜ್ಯದ ಮೊದಲ ವೀಣಾ ವಾದಕಿ ಎಂಬ ಗೌರವಕ್ಕೆ ಸುಮಾ ಸುಧೀಂದ್ರಪಾತ್ರರಾಗಿದ್ದಾರೆ.
‘40 ವರ್ಷಗಳ ನನ್ನ ಸಂಗೀತ ಪಯಣವನ್ನು ಗುರುತಿಸಿಅಕಾಡೆಮಿ ಈ ಪ್ರಶಸ್ತಿ ನೀಡಿರುವುದರಿಂದ ಬಹಳ ಸಂತೋಷವಾಗಿದೆ. ಸಂಗೀತಗಾರರಿಗೆ ಲಭಿಸುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಇದೂ ಒಂದು’ ಎಂದು ಸುಮಾ ಸಂತಸ ಹಂಚಿಕೊಂಡರು.
8ನೇ ವಯಸ್ಸಿನಲ್ಲಿಯೇ ಇವರು ವೀಣೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ವೀಣೆ ರಾಜಾರಾಯರು ಹಾಗೂ ಡಾ. ಚಿಟ್ಟಿಬಾಬು ಅವರಿಂದ ವೀಣಾ ವಾದನವನ್ನು ಕಲಿತಿದ್ದಾರೆ.ಸುಲಭವಾಗಿ ಕೊಂಡೊಯ್ಯಬಲ್ಲ ತರಂಗಿಣಿ ವೀಣೆಯನ್ನು ಇವರು ಆವಿಷ್ಕರಿಸಿದ್ದಾರೆ. 'ವೀಣಾ ವಿದುಷಿ', ಅಧ್ಯಾಪಕಿ, ಸಂಘಟಕಿ, ಆಡಳಿತಾಧಿಕಾರಿ... ಹೀಗೆ ನಾನಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ಅಕಾಡೆಮಿ ಆಫ್ ಮ್ಯೂಸಿಕ್, ಚೌಡಯ್ಯ ಸ್ಮಾರಕ ಭವನದ ಅಧ್ಯಕ್ಷೆಯಾಗಿ 30 ವರ್ಷ ಸೇವೆ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.