ADVERTISEMENT

ಚರ್ಚೆ ನಡೆಸದೆ ಎನ್‌ಇಪಿ ಜಾರಿ: ಎ. ಮುರಿಗೆಪ್ಪ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2024, 14:29 IST
Last Updated 3 ಫೆಬ್ರುವರಿ 2024, 14:29 IST
ಎಐಡಿಎಸ್‌ಒ ನೇತೃತ್ವದಲ್ಲಿ ನಡೆದ ಸಮೀಕ್ಷೆಯ ಕಿರು‌ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎ. ಮುರಿಗೆಪ್ಪ ಮಾತನಾಡಿದರು. ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ರಾಜ್ಯ ಉಪಾಧ್ಯಕ್ಷೆ ಅಭಯಾ ದಿವಾಕರ್, ತುಮಕೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ರಾಜಾಸಾಬ್ ಭಾಗವಹಿಸಿದ್ದರು.
ಎಐಡಿಎಸ್‌ಒ ನೇತೃತ್ವದಲ್ಲಿ ನಡೆದ ಸಮೀಕ್ಷೆಯ ಕಿರು‌ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎ. ಮುರಿಗೆಪ್ಪ ಮಾತನಾಡಿದರು. ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ರಾಜ್ಯ ಉಪಾಧ್ಯಕ್ಷೆ ಅಭಯಾ ದಿವಾಕರ್, ತುಮಕೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ರಾಜಾಸಾಬ್ ಭಾಗವಹಿಸಿದ್ದರು.   

ಬೆಂಗಳೂರು: ‘ಯಾವುದೇ ಚರ್ಚೆಗಳನ್ನು ನಡೆಸದೇ ತರಾತುರಿಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಜಾರಿ ಮಾಡಲಾಗಿತ್ತು. ಇದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಯಿತು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎ. ಮುರಿಗೆಪ್ಪ ಹೇಳಿದರು.

ಜನಪರ ಶಿಕ್ಷಣ ನೀತಿ ರಚಿಸಲು ಆಗ್ರಹಿಸಿ ಎಐಡಿಎಸ್‌ಒ ನಡೆಸಿದ್ದ ಸಮೀಕ್ಷೆಯ ಕಿರು‌ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ಕಾರವು ವಿದ್ಯಾರ್ಥಿಗಳಿಂದ, ಶಿಕ್ಷಕರಿಂದ ಅಭಿಪ್ರಾಯ ಸಂಗ್ರಹಿಸಿಲ್ಲ. ಶಾಲೆ–ಕಾಲೇಜುಗಳಲ್ಲಿ ಅಗತ್ಯ ಇರುವಷ್ಟು ಕೊಠಡಿಗಳಿವೆಯೇ, ಪೂರ್ಣಕಾಲಿಕ ಬೋಧಕರು ಇದ್ದಾರೆಯೇ ಎಂದು ಪರಿಶೀಲಿಸಿಲ್ಲ. ಮೌಲಸೌಕರ್ಯಗಳನ್ನು ಕಲ್ಪಿಸದೇ ಎನ್‌ಇಪಿ ಜಾರಿ ಮಾಡಲಾಗಿದೆ. ಮೂರು ವರ್ಷದ ಪದವಿಯನ್ನು ನಾಲ್ಕು ವರ್ಷಗಳಿಗೆ ಏರಿಸಿ ವಿದ್ಯಾರ್ಥಿಗಳಿಗೆ ತೊಂದರೆ ನೀಡಲಾಗಿದೆ’ ಎಂದು ವಿಷಾದಿಸಿದರು.

ADVERTISEMENT

ತುಮಕೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ರಾಜಾಸಾಬ್ ಮಾತನಾಡಿ, ‘ಸಾರ್ವಜನಿಕ ಶಿಕ್ಷಣ ಉಳಿಸಲು ಜನಪರ ಶಿಕ್ಷಣ ನೀತಿ ರೂಪಿಸಲು ಮಾಡಿರುವ ಈ ಸಮೀಕ್ಷೆ ಚಾರಿತ್ರಿಕವಾದುದು. ತಾರ್ಕಿಕ, ವೈಜ್ಞಾನಿಕವಾಗಿ ಯೋಚನೆ ಮಾಡುವ ವಿದ್ಯಾರ್ಥಿ ಸಮುದಾಯದ ಅವಶ್ಯಕತೆ ಸಮಾಜಕ್ಕೆ ಇದೆ’ ಎಂದರು.

ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ‘ಎನ್‌ಇಪಿ- 2020 ವಿರೋಧಿಸಿ ರಾಜ್ಯದಾದ್ಯಂತ ಸಮೀಕ್ಷೆ ನಡೆಸಲಾಗಿತ್ತು. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ನಡುವೆ ನಡೆಸಲಾಗಿದ್ದ ಈ ಸಮೀಕ್ಷೆಯಲ್ಲಿ 21 ಸಾವಿರ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ’ ಎಂದು ವಿವರಿಸಿದರು.

ಎಐಡಿಎಸ್‌ಒ ರಾಜ್ಯ ಘಟಕದ ಅಧ್ಯಕ್ಷೆ ಅಶ್ವಿನಿ ಕೆ.ಎಸ್. ಮಾತನಾಡಿ, ‘ಸರ್ಕಾರವು ಶಿಕ್ಷಣವನ್ನು ಎನ್‌ಇಪಿ ಮೂಲಕ ವಿಶ್ವದ ಮಾರುಕಟ್ಟೆಯನ್ನಾಗಿಸಲು ಹೊರಟಿದೆ. ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಇಂತಹ ವಿದ್ಯಾರ್ಥಿ ವಿರೋಧಿ ಶಿಕ್ಷಣ ನೀತಿಯ ವಿರುದ್ಧ ಚಳವಳಿ ಕಟ್ಟುವ ಅವಶ್ಯಕತೆ ಇದೆ’ ಎಂದು ತಿಳಿಸಿದರು.

‘ಸುಧಾ’ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ., ಎಐಡಿಎಸ್‌ಒ ‌ರಾಜ್ಯ ಉಪಾಧ್ಯಕ್ಷರಾದ ಹನಮಂತು, ಅಭಯಾ ದಿವಾಕರ್ ಉಪಸ್ಥಿತರಿದ್ದರು.

ಶಿಕ್ಷಣವು ಉದ್ಯೋಗ ಗಳಿಕೆಗೆ ಸೀಮಿತವಲ್ಲ. ಬದಲಿಗೆ ಜೀವನವನ್ನು ಸ್ವತಂತ್ರವಾಗಿ ನಿಭಾಯಿಸಲು ವ್ಯಕ್ತಿಯೊಬ್ಬನಿಗೆ ಧೈರ್ಯ ತುಂಬುವ ಪ್ರಕ್ರಿಯೆ.
ಎ. ಮುರಿಗೆಪ್ಪ, ವಿಶ್ರಾಂತ ಕುಲಪತಿ ಹಂಪಿ ಕನ್ನಡ ವಿ.ವಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.