ಬೆಂಗಳೂರು:ವೇತನ ತಾರತಮ್ಯ, ಸಮ್ಮಿಶ್ರ ವೈದ್ಯಕೀಯ ಪದ್ಧತಿ ಅನುಸರಿಸಲು ಅಡ್ಡಿ ಮಾಡುವುದು ಸೇರಿದಂತೆ ಸರ್ಕಾರದಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ, ನ್ಯಾಷನಲ್ ಇಂಟಿಗ್ರೇಟೆಡ್್ ಮೆಡಿಕಲ್್ ಅಸೋಸಿಯೇಷನ್ (ಎನ್ಐಎಂಎ) ವೈದ್ಯರು ಆಯುಷ್ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.
‘ಕಳೆದ 7ರಂದು ಸರ್ಕಾರವು, ಸರ್ಕಾರಿ ಸೇವೆಯಲ್ಲಿರುವ ಆಯುಷ್ ವೈದ್ಯರು ಅಲೋಪಥಿ ಔಷಧಗಳ ಬಳಕೆ ಮಾಡುವಂತಿಲ್ಲ ಎಂದು ಹೇಳಿದೆ. ಇದು ಏಕಪಕ್ಷೀಯ ಆದೇಶ.ಎನ್ಐಎಂಎ ಸಂಘದ ಅಭಿಪ್ರಾಯವನ್ನೂ ಪರಿಗಣಿಸದೆ ಈ ಆದೇಶ ಮಾಡಲಾಗಿದೆ. ಎನ್ಐಎಂಎ 70 ವರ್ಷಗಳ ಇತಿಹಾಸವಿರುವ, ಭಾರತೀಯ ಚಿಕಿತ್ಸಾ ವೈದ್ಯ ಪದ್ಧತಿಗಳ ವೈದ್ಯರನ್ನು ಪ್ರತಿನಿಧಿಸುವ ಸಂಸ್ಥೆ. ಅದರ ಅಭಿಪ್ರಾಯ ಕೇಳಬೇಕಿತ್ತು’ ಎಂದು ವೈದ್ಯರು ಹೇಳಿದರು.
ಸಂಸ್ಥೆಯ ಸಮ್ಮಿಶ್ರ ವೈದ್ಯಕೀಯ ಪದ್ಧತಿ ಅಂದರೆ, ಆಯುರ್ವೇದ ಮತ್ತು ಆಧುನಿಕ ವೈದ್ಯಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪದ್ಧತಿ ಅನುಸರಿಸುವವರಲ್ಲಿ ಯಾವುದೇ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೂ ಸರ್ಕಾರ ಈ ರೀತಿ ಆದೇಶ ಹೊರಡಿಸಿದೆ ಎಂದು ವೈದ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಇದಲ್ಲದೆ, ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ನೀಡಿದರು.
‘ಈ ಬೇಡಿಕೆ ಈಡೇರಿಸಬೇಕು ಮತ್ತು ವೇತನ ತಾರತಮ್ಯ ಸರಿಪಡಿಸಬೇಕು’ ಎಂದು ಸಂಸ್ಥೆಯ ರಾಜ್ಯಘಟಕದ ಅಧ್ಯಕ್ಷ ಡಾ.ಆರ್.ಜಿ. ಭೂಸನೂರಮಠ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.