ADVERTISEMENT

ಮನೆ ನಿರ್ಮಾಣಕ್ಕೆ ಅಫಿಡವಿಟ್‌ ಬೇಡ

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಶೀಘ್ರ: ಬಿಡಿಎ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 0:03 IST
Last Updated 29 ಜುಲೈ 2022, 0:03 IST
ನಾಡಪ್ರಭು ಕೆಂಪೇಗೌಡ ಬಡಾವಣೆ
ನಾಡಪ್ರಭು ಕೆಂಪೇಗೌಡ ಬಡಾವಣೆ   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಒದಗಿಸುವ ಕಾಮಗಾರಿಯನ್ನು ಚುರುಕುಗೊಳಿಸುವಲ್ಲಿ ಬಿಡಿಎ ನಿರ್ಲಕ್ಷ್ಯ ವಹಿಸಿದೆ ಎಂದು ವಿಧಾನಸಭೆ ಅರ್ಜಿಗಳ ಸಮಿತಿ ಸದಸ್ಯರು ಗುರುವಾರ ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿ ಸದಸ್ಯರು ಜೂನ್ 2ರಂದು ಬಡಾವಣೆಗೆ ಭೇಟಿ ನೀಡಿದಾಗ ಬಿಡಿಎ ಅಧಿಕಾರಿಗಳು ಮನೆ ಕಟ್ಟಿಕೊಳ್ಳಲು ಮುಂದೆ ಬರುವವರಿಗೆ ಮೂಲಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಅಫಿಡವಿಟ್ ಕೇಳುತ್ತಿದ್ದಾರೆ ಎಂದುಶಾಸಕ ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೂರಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಬಿಡಿಎ ಅಧಿಕಾರಿಗಳು, ‘ಅಫಿಡವಿಟ್‌ಗಳನ್ನು ಕೇಳುವುದಿಲ್ಲ. ಆದರೆ ಮನೆ ನಿರ್ಮಿಸಲು ಬಯಸುವವರಿಗೆ ನೀರು, ಯುಜಿಡಿ, ವಿದ್ಯುತ್ ಮತ್ತು ಕನಿಷ್ಠ ರಸ್ತೆಗಳಂತಹ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸುವ ತಾತ್ಕಾಲಿಕ ದಿನಾಂಕಗಳನ್ನು ಎರಡು ವಾರಗಳಲ್ಲಿ ಸಮಿತಿಗೆ ತಿಳಿಸುತ್ತೇವೆ’ ಎಂದರು.

ADVERTISEMENT

ನಾಡಪ್ರಭು ಕೆಂಪೇಗೌಡ ಬಡಾವಣೆ ಎಂಬುದನ್ನು ಬಿಟ್ಟು ಬಿಡಿಎ ಜಾಹೀರಾತನ್ನು ಹೊರಡಿಸಿರುವುದನ್ನು ಸಮಿತಿ ಆಕ್ಷೇಪಿಸಿದಾಗ, ಅದನ್ನು ಸರಿಪಡಿಸುವುದಾಗಿ ಮತ್ತು ಕಾಲಮಿತಿಯೊಳಗೆ ಬಡಾವಣೆಯನ್ನು ಅಭಿವೃದ್ಧಿಪಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಸಂಪೂರ್ಣ ಮಾರಾಟ ಪತ್ರವನ್ನು ನೀಡುವಾಗ, ಐದು ವರ್ಷಗಳಲ್ಲಿ ಮನೆ ನಿರ್ಮಿಸದ ಆಧಾರದ ಮೇಲೆ ದಂಡ ವಿಧಿಸುವುದಿಲ್ಲ ಎಂದು ಬಿಡಿಎ ಭರವಸೆ ನೀಡಿದೆ.

ಸುರೇಶ್ ಕುಮಾರ್ ನೇತೃತ್ವದ ಹಂಚಿಕೆದಾರರ ನಿಯೋಗಕ್ಕೆ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಬಿಡಿಎ ಒಪ್ಪಿಕೊಂಡಿತು. ಶೀಘ್ರದಲ್ಲೇ ದಿನಾಂಕವನ್ನು ನಿಗದಿಪಡಿಸ
ಲಾಗುವುದು ಎಂದು ಹೇಳಿತು.

ಸಮಿತಿ ಸದಸ್ಯರಾದ ಎಸ್ ಸುರೇಶ್ ಕುಮಾರ್, ವೀರಭದ್ರಯ್ಯ, ಉಮಾ- ನಾಥ ಕೋಟ್ಯಾನ್, ರಾಜಶೇಖರ್ ಪಾಟೀಲ್, ನೆಹರು ಓಲೇಕಾರ್ ಇದ್ದರು.

ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಡಿಎ ಆಯುಕ್ತ ರಾಜೇಶ್ ಗೌಡ, ಬಿಡಿಎ ಎಂಜಿನಿಯರ್‌ ಸದಸ್ಯ ಎಚ್.ಆರ್. ಶಾಂತರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.