ADVERTISEMENT

ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆಯಾಗದು

ಜಲಮಂಡಳಿ ವಾಗ್ದಾನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 1:34 IST
Last Updated 30 ಜನವರಿ 2020, 1:34 IST
   

ಬೆಂಗಳೂರು: ‘ಮುಂಬರುವ ಬೇಸಿಗೆಯಲ್ಲಿ ನಗರದಲ್ಲಿ ಕುಡಿಯುವ ನೀರಿಗೆ ಯಾವುದೇ ಕೊರತೆಯಾಗದು’ ಎಂದು ಜಲಮಂಡಳಿ ಭರವಸೆ ನೀಡಿದೆ.

ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಬುಧವಾರ ಈ ಕುರಿತು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಜಲಮಂಡಳಿಯ ಮುಖ್ಯ ಎಂಜಿನಿಯರ್‌ (ಪಶ್ಚಿಮ) ದೇವರಾಜು, ‘ಜೂನ್‌ ತಿಂಗಳವರೆಗೆ ಪೂರೈಸುವಷ್ಟು ನೀರಿನ ಸಂಗ್ರಹ ಇದೆ. ನೀರು ಪೂರೈಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ದೂರುಗಳು ಬೇಸಿಗೆಯಲ್ಲಿ ಹೆಚ್ಚು. ಬೇಸಿಗೆ ನೀರಿನ ಸಮಾನ ಹಂಚಿಕೆಗೆ ಆಗುವಂತೆ ನೊಡಿಕೊಳ್ಳಲು ಹಿರಿಯ ಅಧಿಕಾರಿಗಳಿಗೆ ಉಸ್ತುವಾರಿ ವಹಿಸಲಾಗುತ್ತದೆ. ಫೆಬ್ರುವರಿ ಮಧ್ಯದಿಂದಲೇ ನೀರಿನ ಕೊರತೆ ಇರುವ ಪ್ರದೇಶಗಳಿಗೆ ಟ್ಯಾಂಕರ್‌ ನೀರು ಪೂರೈಕೆಗೆ ಕ್ರಮಕೈಗೊಳ್ಳಲಿದ್ದೇವೆ’ ಎಂದರು.

ಕೆರೆಗಳಿಗೆ ರಾಜಕಾಲುವೆಗಳಿಗೆ ಒಳಚರಂಡಿಯ ಕೊಳಚೆ ನೀರು ಹರಿಸುವುದನ್ನು ಯಾವಾಗ ನಿಲ್ಲಿಸುತ್ತೀರಿ ಎಂದು ಮೇಯರ್‌ ಪ್ರಶ್ನಿಸಿದರು.

ADVERTISEMENT

‘ಕೆರೆ ಹಾಗೂ ರಾಜಕಾಲುವೆಗಳಿಗೆ ಕೊಳಚೆ ನೀರು ಸೇರುತ್ತಿರುವ 914 ಸ್ಥಳಗಳನ್ನು ಗುರುತಿಸಿದ್ದೇವೆ. ಇಂತಹ ಕಡೆ ₹ 72 ಕೋಟಿ ವೆಚ್ಚದಲ್ಲಿ ಕೊಳವೆಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ವರ್ಷದ ಅಂತ್ಯದೊಳಗೆ ಕೆರೆ ಹಾಗೂ ರಾಜಕಾಲುವೆಗಳಿಗೆ ಕೊಳಚೆ ನೀರು ಸೇರುತ್ತಿರುವುದನ್ನು ಸಂಪೂರ್ಣ ಹತೋಟಿಗೆ ತರುತ್ತೇವೆ’ ಎಂದು ದೇವರಾಜು ಭರವಸೆ ನೀಡಿದರು.

‘110 ಹಳ್ಳಿಗಳಲ್ಲಿ ಜಲಮಂಡಳಿ ಕುಡಿಯುವ ನೀರು ಪೂರೈಕೆಗೆ ಹಾಗೂ ಒಳಚರಂಡಿ ಕೊಳವೆ ಅಳವಡಿಸಲು ರಸ್ತೆ ಅಗೆದಿದೆ. ಆದರೆ, ದುರಸ್ತಿಪಡಿಸಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ಕೆಸರು, ಬೇಸಿಗೆಯಲ್ಲಿ ದೂಳು. ಯಾರಿಗೆ ಹೇಳುವುದು ನಮ್ಮ ಗೋಳು’ ಎಂದು ಅನೇಕ ಸದಸ್ಯರು ಅಳಲು ತೋಡಿಕೊಂಡರು.

ಅಂಕಿ ಅಂಶ

145 ಕೋಟಿ ಲೀಟರ್‌

ನಗರಕ್ಕೆ ನಿತ್ಯ ಪೂರೈಕೆಯಾಗುವ ನೀರು

40 ಕೋಟಿ ಲೀಟರ್‌

ನಗರದಲ್ಲಿ ನಿತ್ಯ ಬಳಕೆಯಾಗುವ ಕೊಳವೆ ನೀರಿನ ಪ್ರಮಾಣ

152.3 ಕೋಟಿ ಲೀಟರ್‌

ನಗರದಲ್ಲಿ ನಿತ್ಯ ಉತ್ಪಾದನೆಯಾಗುವ ಕೊಳಚೆ ನೀರು

111.2 ಕೋಟಿ ಲೀಟರ್‌

ಎಸ್‌ಟಿಪಿಗಳ ಮೂಲಕ ಸಂಸ್ಕರಣೆಗೊಳ್ಳುತ್ತಿರುವ ನೀರು

41.1 ಕೋಟಿ ಲಿಟರ್‌

ನೀರು ಸಂಸ್ಕರಣೆಗೆ ಒಳಗಾಗುತ್ತಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.