ADVERTISEMENT

ಕೊಲೆ ಆರೋಪಿ ಕಾಲಿಗೆ ಗುಂಡೇಟು

ಡಿ.12ರಂದು ಕೃತ್ಯವೆಸಗಿ ಪರಾರಿಯಾಗಿದ್ದ: ಪೊಲೀಸರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 2:52 IST
Last Updated 25 ಡಿಸೆಂಬರ್ 2019, 2:52 IST

ಬೆಂಗಳೂರು: ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ರಘು (28) ಎಂಬುವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪ್ರಮುಖ ಆರೋಪಿ ಬಾಬು ಕಾಲಿಗೆ ಗುಂಡು ಹಾರಿಸಿ ಮಂಗಳವಾರ ಸೆರೆ ಹಿಡಿಯಲಾಗಿದೆ.

’ಡಿ. 12ರಂದು ಕೃತ್ಯ ಎಸಗಿದ್ದ ಬಾಬು ತಲೆಮರೆಸಿಕೊಂಡು ಓಡಾಡುತ್ತಿದ್ದ. ಜಾಲಹಳ್ಳಿ ಬಳಿಯ ಎಚ್‌ಎಂಟಿ ಬಸ್‌ ನಿಲ್ದಾಣ ಬಳಿ ಆತ ಕಾಣಿಸಿಕೊಂಡಿದ್ದ. ಬಂಧಿಸಲು ಹೋಗಿದ್ದ ಪೊಲೀಸರಿಗೆ ಚಾಕುವಿನಿಂದ ಇರಿದಿದ್ದ. ಆತ್ಮರಕ್ಷಣೆಗಾಗಿ ಪಿಎಸ್‌ಐ ವೆಂಕಟರಮಣ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹೇಳಿದರು.

‘ಬಾಬುವಿನ ಬಲಗಾಲಿಗೆ ಗುಂಡು ತಗುಲಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನಿಂದ ಹಲ್ಲೆಗೀಡಾದ ಹೆಡ್‌ ಕಾನ್‌ಸ್ಟೆಬಲ್ ಅನಂತರಾಜು ಅವರಿಗೂ ಗಾಯವಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ’ ಎಂದರು.

ADVERTISEMENT

ಕಾರಿನಲ್ಲಿ ಬಂದು ಕೊಲೆ: ‘ನಂದಿನಿ ಲೇಔಟ್ ಬಳಿಯ ಲಗ್ಗೆರೆ ಮುಖ್ಯರಸ್ತೆಯ ಬಾರೊಂದರ ಬಳಿ ರಘು ಇದ್ದರು.ಆರೋಪಿ ಬಾಬು ಹಾಗೂ ಆತನ ಸಹಚರರು ಕಾರಿನಲ್ಲಿ ಬಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು’ ಎಂದು ಶಶಿಕುಮಾರ್ ಹೇಳಿದರು.

‘ತನಿಖೆಗೆ ರಚಿಸಲಾಗಿದ್ದ ವಿಶೇಷ ತಂಡ, ಆರೋಪಿ ನರಸಿಂಹ ಎಂಬಾತನನ್ನು ಈ ಹಿಂದೆಯೇ ಬಂಧಿಸಿತ್ತು. ಆತ ನೀಡಿದ್ದ ಮಾಹಿತಿಯಂತೆ ಪ್ರಭಾಕರ್ ಎಂಬುವರನ್ನೂ ಸೆರೆ ಹಿಡಿಯಲಾಗಿತ್ತು. ಬಾಬುಗಾಗಿ ಶೋಧ ಮುಂದುವರಿಸಿತ್ತು’ ಎಂದರು.

‘ಬಂಧಿತ ಪ್ರಭಾಕರ್, ಕೊಲೆಯಾದ ರಘುವಿನ ಮಾವ. ಆತನೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿರುವ ಅನುಮಾನವಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.