ಬೆಂಗಳೂರು: ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ಬಂದ್ ಆಗಿ ಎರಡು ವರ್ಷವಾದರೂ ನೋಟು ಬದಲಾವಣೆ ದಂಧೆ ಮಾತ್ರ ನಿಂತಿಲ್ಲ. ನಂದಿನಿ ಲೇಔಟ್ನಲ್ಲಿ ಭಾನುವಾರ (ಡಿ.9) ಹಳೇ ನೋಟು ಬದಲಾವಣೆಗೆ ಪ್ರಯತ್ನಿಸುತ್ತಿದ್ದ ನಾಲ್ವರು, ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಅವರ ಬಳಿ ₹1.95 ಕೋಟಿ ಮೌಲ್ಯದ ಹಳೇ ನೋಟುಗಳು ಪತ್ತೆಯಾಗಿವೆ.
‘ತಿಪ್ಪಸಂದ್ರ ಮಲ್ಲೇಶಪಾಳ್ಯದ ರಮೇಶ್ ಅಯ್ಯರ್, ಮಾರತ್ತಹಳ್ಳಿ ಬಸವನಗರದ ಶರತ್, ಕನಕಪುರದ ರಸ್ತೆಯ ಮಂಜುನಾಥನಗರದ ವೆಂಕಟರಾಮು ಹಾಗೂ ಯಶವಂತಪುರದ ಪ್ರಕಾಶ್ ಬಂಧಿತರು. ಅವರೆಲ್ಲ ವ್ಯಾಪಾರಿಗಳಾಗಿದ್ದು, ತಮ್ಮ ಬಳಿ ಇದ್ದ ಹಳೇ ನೋಟುಗಳನ್ನೇ ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು’ ಎಂದು ನಂದಿನಿ ಲೇಔಟ್ ಪೊಲೀಸರು ಹೇಳಿದರು.
‘ನೋಟುಗಳ ಸಮೇತ ನಂದಿನಿ ಲೇಔಟ್ ಬಸ್ ನಿಲ್ದಾಣ ಬಳಿ ಭಾನುವಾರ ಬೆಳಿಗ್ಗೆ 7 ಗಂಟೆಗೆ ಇನ್ನೋವಾ ಕಾರಿನಲ್ಲಿ ಬಂದಿದ್ದ ಆರೋಪಿಗಳು, ಕಾಯುತ್ತ ನಿಂತಿದ್ದರು. ಅವರ ನಡೆ ಬಗ್ಗೆ ಅನುಮಾನಗೊಂಡಿದ್ದ ಸ್ಥಳೀಯರೊಬ್ಬರು ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.