ADVERTISEMENT

ಯಾವ ನೈತಿಕತೆ ಮೇಲೆ ಅಶೋಕ್ ಹಾರನಹಳ್ಳಿ ಸ್ಪರ್ಧೆ: ಶಂಕರ್ ಗುಹಾ ಪ್ರಶ್ನೆ

ಬ್ರಾಹ್ಮಣ ಸಮಾಜದ ಮುಖಂಡ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 19:31 IST
Last Updated 16 ಅಕ್ಟೋಬರ್ 2021, 19:31 IST

ಬೆಂಗಳೂರು: ‘ಸಹಕಾರಿ ಬ್ಯಾಂಕಿನ ವಂಚನೆ ಪ್ರಕರಣಗಳ ಆರೋಪಿಗಳ ಪರ ವಕಾಲತ್ತು ವಹಿಸಿರುವ ವಕೀಲ ಅಶೋಕ್ ಹಾರನಹಳ್ಳಿ ಅವರುಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಯಾವ ನೈತಿಕತೆಯ ಮೇಲೆ ಸ್ಪರ್ಧಿಸುತ್ತಿದ್ದಾರೆ’ ಎಂದು ಬ್ರಾಹ್ಮಣ ಸಮಾಜದ ಮುಖಂಡ ಶಂಕರ್ ಗುಹಾ ದ್ವಾರಕನಾಥ್ ಪ್ರಶ್ನಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮಲೆನಾಡು ಎಜುಕೇಷನಲ್ ಟ್ರಸ್ಟ್ ವಿಷಯವಾಗಿ ಅಶೋಕ್ ಹಾರನಹಳ್ಳಿ ಅವರೂ ಸೇರಿದಂತೆ ಆರು ಮಂದಿ ಸದಸ್ಯರ ಮೇಲೆ ‍ಪ್ರಕರಣ ದಾಖಲಿಸುವಂತೆಹಾಸನದ ಸಿವಿಲ್ ಕೋರ್ಟ್ ಆದೇಶಿಸಿದೆ. ಆದರೆ, ಮಹಾಸಭಾ ಚುನಾವಣೆಯ ಅಖಾಡಕ್ಕಿಳಿಯಲು ಅಶೋಕ್ ಅವರು ಏರ್ಪಡಿಸಿರುವ ಬೃಹತ್ ಸಭೆಯಲ್ಲಿಶಾಸಕ ರವಿಸುಬ್ರಹ್ಮಣ್ಯ ಅವರು ಉಪಸ್ಥಿತರಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ’ ಎಂದರು.

‘ವಸಿಷ್ಠ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ವಂಚನೆ ಪ್ರಕರಣದ ಆರೋಪ ಹೊತ್ತಿರುವ ಅಂದಿನ ಮಹಾಸಭಾದ ಅಧ್ಯಕ್ಷ ವೆಂಕಟನಾರಾಯಣ ಅವರು ಯಾವ ನೈತಿಕತೆಯ ಕಾರಣಕ್ಕಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತೋ, ಅದೇ ನೈತಿಕತೆಅಶೋಕ್ ಅವರಿಗೆ ಅನ್ವಯಿಸುವುದಿಲ್ಲವೇ’ ಎಂದೂ ಪ್ರಶ್ನಿಸಿದರು.

ADVERTISEMENT

‘ಬಸವನಗುಡಿ ಕ್ಷೇತ್ರದ ಬಹುತೇಕ ಬ್ರಾಹ್ಮಣರ ಕಣ್ಣೀರಿಗೆ ಕಾರಣರಾದ ಗುರುರಾಘವೇಂದ್ರ ಕೋ-ಆಪರೇಟಿವ್‌ ಬ್ಯಾಂಕ್‌ನ ಅತಿದೊಡ್ಡ ಸುಸ್ತಿದಾರ ರಘುನಾಥ್‌ ಪರಅಶೋಕ್‌ ಅವರು ವಕಾಲತ್ತು ವಹಿಸಿದ್ದು, ಇವರ ಬೆಂಬಲಕ್ಕೆ ಶಾಸಕ ಹಾಗೂ ಸಂಸದ ನಿಂತಿರುವುದು ಖಂಡನೀಯ. ಇದರ ಹಿಂದೆ ದೊಡ್ಡ ಪಿತೂರಿ ನಡೆದಿದೆ’ ಎಂದು ಅನುಮಾನ ವ್ಯಕ್ತಪಡಿಸಿದರು.

‘ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನವನ್ನು ದುರುಪಯೋಗಪಡಿಸಿಕೊಂಡು, ವೆಂಕಟನಾರಾಯಣ ಮತ್ತು ಅವರ ತಂಡ ವಂಚನೆ ಪ್ರಕರಣಗಳನ್ನು ಮುಚ್ಚಿಹಾಕಲು ತಂತ್ರಗಾರಿಕೆ ರೂಪಿಸಿರುವ ಸಂಶಯ ಮೂಡುತ್ತಿದೆ’ ಎಂದೂ ಆರೋಪಿಸಿದರು.

‘ಜನಪ್ರತಿನಿಧಿಗಳಾದ ರವಿಸುಬ್ರಹ್ಮಣ್ಯ ಮತ್ತು ತೇಜಸ್ವಿ ಸೂರ್ಯ ಅವರು ತಾವು ಯಾರ ಪರ ಇದ್ದೇವೆ ಎಂಬುದನ್ನುಜನಸಾಮಾನ್ಯರಿಗೆ ಸ್ಪಷ್ಟವಾಗಿ ತಿಳಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.