ADVERTISEMENT

₹ 81 ಕೋಟಿ ಮೊತ್ತದ ಖಾತೆಗಳ ಜಪ್ತಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 20:51 IST
Last Updated 26 ಡಿಸೆಂಬರ್ 2020, 20:51 IST

ಬೆಂಗಳೂರು: ಮೊಬೈಲ್ ಆ್ಯಪ್‌ ಮೂಲಕ ಸಾಲ ನೀಡಿ, ಅದರ ವಸೂಲಿ ನೆಪದಲ್ಲಿ ಕಿರುಕುಳ ನೀಡುತ್ತಿದ್ದ ಆರೋಪದಡಿ ಮೂವರನ್ನು ಹೈದರಾಬಾದ್ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಹಲವು ಕಂಪನಿಗಳಿಗೆ ಸೇರಿದ್ದ ₹ 81 ಕೋಟಿ ಹಣವಿದ್ದ ವಿವಿಧ ಬ್ಯಾಂಕ್‌ಗಳ 350 ಖಾತೆಗಳನ್ನೂ ಜಪ್ತಿ ಮಾಡಿದ್ದಾರೆ.

ಅನ್ನಿಯು ಕಂಪನಿ ಆಡಳಿತಾಧಿಕಾರಿ ಕೆ. ಈಶ್ವರ್, ಟ್ರೂತ್ ಹೈ ಕಂಪನಿಯ ವ್ಯವಸ್ಥಾಪಕರಾದ ಮಧುಸೂದನ್ ಹಾಗೂ ಸತೀಶ್‌ ಕುಮಾರ್ ಬಂಧಿತರು. ಆ್ಯಪ್‌ ಮೂಲಕ ಸಾಲ ನೀಡಿ ಕಿರುಕುಳ ನೀಡಿದ್ದ ಬಗ್ಗೆ ಹೈದರಾಬಾದ್ ಸೈಬರ್ ಕ್ರೈಂ ಠಾಣೆಯಲ್ಲಿ 27 ಪ್ರಕರಣಗಳು ದಾಖಲಾಗಿದ್ದವು. ಅದರ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು.

‘ಬೆಂಗಳೂರು ಹಾಗೂ ಗುರುಗ್ರಾಮಗಳಲ್ಲಿರುವ ಕಂಪನಿಗಳು, 47 ಆ್ಯಪ್‌ಗಳ ಮೂಲಕ ಸಾಲ ನೀಡುವ ವ್ಯವಹಾರ ಮಾಡುತ್ತಿದ್ದವು. ಕಾಲ್‌ ಸೆಂಟರ್‌ಗಳ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಸಾಲ ಕೊಡುತ್ತಿದ್ದವು. ಸಾಲ ವಸೂಲಿ ವೇಳೆ ನಾನಾ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿತ್ತು. ಹೀಗಾಗಿ, ಬೆಂಗಳೂರು ಹಾಗೂ ಗುರುಗ್ರಾಮಗಳಲ್ಲಿದ್ದ ಕಂಪನಿಗಳ ಕಚೇರಿ ಮೇಲೆ ಸೋಮವಾರ ದಾಳಿ ಮಾಡಲಾಯಿತು. ಬೆಂಗಳೂರಿನ ಮೂವರು ಸೇರಿ ಒಟ್ಟು 11 ಮಂದಿಯನ್ನು ಬಂಧಿಸಲಾಗಿದೆ’ ಎಂದು ಹೈದರಾಬಾದ್ ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ಪ್ರತಿಯೊಂದು ಕಾಲ್‌ ಸೆಂಟರ್‌ನಲ್ಲೂ 300ರಿಂದ 600 ಮಂದಿ ಕೆಲಸ ಮಾಡುತ್ತಿದ್ದರು’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.