ADVERTISEMENT

ಕೊರೊನಾ ಜಾಗೃತಿಗೆ ಆನ್‍ಲೈನ್ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 19:46 IST
Last Updated 21 ಏಪ್ರಿಲ್ 2020, 19:46 IST
ಆನ್‍ಲೈನ್ ಕಾರ್ಯಾಗಾರದಲ್ಲಿ ಕೆ.ಆರ್.ವೇಣುಗೋಪಾಲ್, ಗಣನಾಥ್ ಶೆಟ್ಟಿ, ಖಾದ್ರಿ ನರಸಿಂಹಯ್ಯ, ಸತೀಶ್ ಗೌಡ ಭಾಗವಹಿಸಿದ್ದರು
ಆನ್‍ಲೈನ್ ಕಾರ್ಯಾಗಾರದಲ್ಲಿ ಕೆ.ಆರ್.ವೇಣುಗೋಪಾಲ್, ಗಣನಾಥ್ ಶೆಟ್ಟಿ, ಖಾದ್ರಿ ನರಸಿಂಹಯ್ಯ, ಸತೀಶ್ ಗೌಡ ಭಾಗವಹಿಸಿದ್ದರು   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಘಟಕಗಳನ್ನು ಹೊಂದಿರುವ ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರು, ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರಿಗೆ ಕೊರೊನಾ ಸೋಂಕು ತಡೆಯುವ ಕುರಿತು ಜಾಗೃತಿ ಮೂಡಿಸುವ ಆನ್‍ಲೈನ್ ಕಾರ್ಯಾಗಾರವನ್ನು ಮಂಗಳವಾರ ಹಮ್ಮಿಕೊಳ್ಳಲಾಯಿತು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್,' ಈಗಿನ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕು ಕುರಿತು ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮಗಳು ಬಹಳ ಪ್ರಯೋಜನಕಾರಿ. ಕಾರ್ಯಾಗಾರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು, ಕೊರೊನಾ ತಡೆಗಟ್ಟಲು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು' ಎಂದರು.

ಎನ್‍ಎಸ್‍ಎಸ್ ಪ್ರಾದೇಶಿಕ ನಿದೇರ್ಶಕ ಖಾದ್ರಿ ನರಸಿಂಹಯ್ಯ, 'ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರು ಭಾಗವಹಿಸುತ್ತಿರುವುದು ಶ್ಲಾಘನೀಯ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಆರೋಗ್ಯ ಸೇತು ಆಪ್ ಅನ್ನು ಮೊಬೈಲ್‍ನಲ್ಲಿ ಅಳವಡಿಸಿಕೊಂಡು, ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಕೊಡಬೇಕು' ಎಂದು ಕಿವಿಮಾತು ಹೇಳಿದರು.

ADVERTISEMENT

ರಾಜ್ಯ ಎನ್‍ಎಸ್‍ಎಸ್ ಕೋಶಾಧಿಕಾರಿ ಗಣನಾಥ್ ಶೆಟ್ಟಿ, 'ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಜನರಲ್ಲಿ ವೈಜ್ಞಾನಿಕ ಮಾಹಿತಿ ಕೊರತೆ ಇದೆ. ಕಾರ್ಯಾಗಾರದಿಂದ ಜನರಿಗೆ ಅಗತ್ಯ ಮಾಹಿತಿ ರವಾನೆಯಾಗಲಿದೆ.'ಸ್ವಯಂಸೇವಕರಿಗೆ ಆನ್‍ಲೈನ್ ಮೂಲಕ ಕಾರ್ಯಾಗಾರ ಏರ್ಪಡಿಸಿರುವ ಬೆಂಗಳೂರು ವಿಶ್ವವಿದ್ಯಾಲಯ ಇತರೆ ವಿಶ್ವವಿದ್ಯಾಲಯಗಳಿಗೆ ಮಾದರಿಯಾಗಿದೆ' ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಎನ್‍ಎಸ್‍ಎಸ್ ಘಟಕದ ಸಂಯೋಜನಾಧಿಕಾರಿ ಸತೀಶ್ ಗೌಡ, 'ಸ್ವಯಂಸೇವಕರು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಸೇವೆ ನೀಡಬೇಕು' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.