ADVERTISEMENT

ದೇಶದ ಆತ್ಮವನ್ನೇ ಕೊಂದ ಬಿಜೆಪಿ: ಸಿದ್ದರಾಮಯ್ಯ ಕಿಡಿ

70 ದಿನಗಳ ಲಾಕ್‌ಡೌನ್‌ ನಿಷ್ಪ್ರಯೋಜಕ ಎಂದ ವಿರೋಧ ಪಕ್ಷದ ನಾಯಕ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 20:10 IST
Last Updated 8 ಜೂನ್ 2020, 20:10 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಕೊರೊನಾ ಸೋಂಕು ನಿಯಂತ್ರಿಸಲು ಘೋಷಿಸಲಾಗಿದ್ದ 70 ದಿನಗಳ ಲಾಕ್‌ಡೌನ್‌ ನಿಷ್ಪ್ರಯೋಜಕವಾದುದು. ರಾಜ್ಯದಲ್ಲಿ ಪ್ರತಿ ಸಂತ್ರಸ್ತ ಕುಟುಂಬಕ್ಕೆ ₹10 ಸಾವಿರ ನೆರವನ್ನಾದರೂ ಸರ್ಕಾರ ಘೋಷಿಸಬೇಕಿತ್ತು’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣ, ನಿರ್ವಹಣೆ, ಸಂತ್ರಸ್ತರಿಗೆ ಪರಿಹಾರ ಮತ್ತು ಆರ್ಥಿಕ ಪುನಶ್ಚೇತನ’ ಕುರಿತು ಸಿಪಿಐ (ಎಂ) ಬೆಂಗಳೂರು ಘಟಕ ಸೋಮವಾರ ಆಯೋಜಿಸಿದ್ದ ವಿರೋಧಪಕ್ಷಗಳ ನಾಯಕರ ಆನ್‌ಲೈನ್‌ ಸಂವಾದದಲ್ಲಿ ಮಾತನಾಡಿದ ಅವರು, ‘ಕೋವಿಡ್‌ ಪರಿಹಾರ ಕಾರ್ಯಗಳಿಗೆ ಕೇರಳ ಸರ್ಕಾರ ₹20 ಸಾವಿರ ಕೋಟಿ ಘೋಷಿಸಿದ್ದರೆ, ತೆಲಂಗಾಣ ₹35 ಸಾವಿರ ಕೋಟಿ ತೆಗೆದಿಟ್ಟಿದೆ. ರಾಜ್ಯ ಸರ್ಕಾರ ₹10 ಸಾವಿರ ಕೋಟಿ ಖರ್ಚು ಮಾಡಿದ್ದರೂ, ಸಂತ್ರಸ್ತರ ಪ್ರತಿ ಕುಟುಂಬಕ್ಕೆ ₹10 ಸಾವಿರ ನೀಡಬಹುದಾಗಿತ್ತು’ ಎಂದರು.

‘ನಗರಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದವರ ಪೈಕಿ 13 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಬಾದಾಮಿ ಕ್ಷೇತ್ರಕ್ಕೆ ಮರಳಿದ್ದಾರೆ. ಇವರಲ್ಲಿ 2 ಸಾವಿರ ಜನರಿಗೆ ಮಾತ್ರ ಉದ್ಯೋಗ ಖಾತ್ರಿಯಡಿ ಕೆಲಸ ನೀಡಲಾಗಿದೆ. ಆತ್ಮನಿರ್ಭರದ ಹೆಸರಲ್ಲಿ ಬಿಜೆಪಿಯವರು ದೇಶದ ಆತ್ಮವನ್ನೇ ಕೊಂದಿದ್ದಾರೆ’ ಎಂದು ದೂರಿದರು.

ADVERTISEMENT

‘ತೆರಿಗೆ ಸಂಗ್ರಹ ಪ್ರಮಾಣ ಇಳಿದಿರುವ ಬಗ್ಗೆ, ವಲಸೆ ಕಾರ್ಮಿಕರ ಸಂಕಷ್ಟದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಅಂಕಿ–ಅಂಶ ಸಹಿತ ವರದಿಗಳು ಬರುತ್ತಿವೆ. ಇದನ್ನು ಓದಿಯಾದರೂ, ಕೇಂದ್ರ ಸರ್ಕಾರದ ದುರಾಡಳಿತವನ್ನು ಜನ ಅರ್ಥ ಮಾಡಿಕೊಳ್ಳಬೇಕು’ ಎಂದರು.

ಸಿಪಿಐ ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶ್‌, ‘ಬೇರೆ ದೇಶಗಳಲ್ಲಿ ಡಿಸೆಂಬರ್‌ನಲ್ಲಿಯೇ ಕೊರೊನಾ ಸೋಂಕು ಹರಡಿತ್ತು. ವಿದೇಶದಿಂದ ಭಾರತಕ್ಕೆ ಬರುವವರನ್ನು ತಡೆಯುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿಲ್ಲ’ ಎಂದು ದೂರಿದರು.

ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್. ವಿಮಲಾ, ‘ನಷ್ಟದ ನೆಪದಲ್ಲಿ ಗಾರ್ಮೆಂಟ್ಸ್‌ ಕಾರ್ಖಾನೆಗಳನ್ನು ಮುಚ್ಚಲಾಗುತ್ತಿದ್ದು, ಮಹಿಳೆಯರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಈ ಕಾರ್ಖಾನೆಗಳನ್ನು ಮುಚ್ಚಬಾರದು, ಮಹಿಳೆಯರಿಗೆ ಉದ್ಯೋಗ ಭದ್ರತೆ ನೀಡಬೇಕು ಎಂದು ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ಮನವಿ ಮಾಡಿದರು.

ಸಿಪಿಐ (ಎಂ)ನ ರಾಜ್ಯ ಕಾರ್ಯದರ್ಶಿ ಯು. ಬಸವರಾಜು, ಬೆಂಗಳೂರು ಘಟಕದ ಕಾರ್ಯದರ್ಶಿ ಕೆ.ಎನ್. ಉಮೇಶ್, ಜಿ.ಎನ್. ನಾಗರಾಜ, ಮೀನಾಕ್ಷಿ ಸುಂದರಂ ಇದ್ದರು.

‘ವಿಶೇಷ ಅಧಿವೇಶನ ಕರೆಯಿರಿ’
‘ಲಾಕ್‌ಡೌನ್‌ ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಈ ಕುರಿತು ಚರ್ಚಿಸಲು ಕೂಡಲೇ ವಿಶೇಷ ಅಧಿವೇಶನ ಕರೆಯಬೇಕು. ಕೊರೊನಾ ಕ್ರಮಗಳಿಗಾಗಿ ಮಾಡಿರುವ ವೆಚ್ಚ, ಕೋವಿಡ್‌–19 ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಂದಿರುವ ಹಣದ ಕುರಿತು ಶ್ವೇತಪತ್ರ ಹೊರಡಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.

‘ಕಂತು ಕಟ್ಟುವ ದಿನವನ್ನು ಮುಂದೂಡಲಾಯಿತೆ ವಿನಾ ಬಡ್ಡಿ ಅಥವಾ ತೆರಿಗೆ ಮನ್ನಾ ಮಾಡುವಂತಹ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿಲ್ಲ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದವರ ಅಳಲು ಆಲಿಸಲು ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ’ ಎಂದರು.

**
ಕೋವಿಡ್‌–19 ಪರಿಸ್ಥಿತಿ ನಿರ್ವಹಣೆಯಲ್ಲಿ ಕೇಂದ್ರ–ರಾಜ್ಯ ಸರ್ಕಾರ ವಿಫಲವಾಗಿವೆ. ಈ ಕುರಿತು ಚರ್ಚಿಸಲು ಸದ್ಯದಲ್ಲೇ ಎಲ್ಲ ವಿರೋಧಪಕ್ಷಗಳ ಸಭೆ ಕರೆಯಲಾಗುವುದು.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.