ನವದೆಹಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆ ಪ್ರಶ್ನಿಸಿ ಹೈಕೋರ್ಟ್ನಲ್ಲೇ ಅರ್ಜಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಮಂಗಳವಾರ ನಿರ್ದೇಶನ ನೀಡಿದೆ.
ಜಿಬಿಎ ರಚನೆ ಕಾನೂನುಬಾಹಿರ ಎಂದು ಆರೋಪಿಸಿ ಹಿರಿಯ ರಂಗಕರ್ಮಿ ಪ್ರಕಾಶ ಬೆಳವಾಡಿ ಹಾಗೂ ಇತರರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜಾಯ್ಮಲ್ಯ ಬಾಗ್ಚಿ ಪೀಠವು, ‘ಚುನಾಯಿತ ಜನಪ್ರತಿನಿಧಿಗಳ ಅಧಿಕಾರ ಹರಣ ಆಗುತ್ತಿರುವ ಬಗ್ಗೆ ನೀವು ಎತ್ತಿರುವ ಪ್ರಶ್ನೆ ಸೂಕ್ತವಾಗಿದೆ. ಆದರೆ, ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸದೆ ನೇರವಾಗಿ ಸುಪ್ರೀಂ ಕೋರ್ಟ್ಗೆ ಬಂದಿದ್ದು ಏಕೆ‘ ಎಂದು ಪ್ರಶ್ನಿಸಿತು.
ಆಗ ಅರ್ಜಿದಾರರ ಪರ ವಕೀಲರು, ‘ಜಿಬಿಎ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಹೀಗಾಗಿ, ಸುಪ್ರೀಂ ಕೋರ್ಟ್ಗೆ ಬಂದಿದ್ದೇವೆ‘ ಎಂದರು. ಪೀಠವು ಅರ್ಜಿ ಹಿಂಪಡೆಯಲು ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಿತು.
‘ಜಿಬಿಎ ರಚನೆ ಸಂವಿಧಾನ ವಿರೋಧಿ. ಜಿಬಿಎ ರಚನೆಯಿಂದ ಅಧಿಕಾರ ವಿಕೇಂದ್ರೀಕರಣ ಆಗುವುದಿಲ್ಲ. ಅಧಿಕಾರದ ಮರು ಕೇಂದ್ರೀಕರಣ ಆಗುತ್ತದೆ‘ ಎಂದು ಅರ್ಜಿದಾರರು ದೂರಿದ್ದಾರೆ.