ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ 28 ವರ್ಷದ ಯುವಕನ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ ನಾಲ್ವರಿಗೆ ನೆರವಾಗಿದ್ದಾರೆ.
ಹೊಸಕೋಟೆ ತಾಲ್ಲೂಕಿನ ಆನಂದ್ ಕುಮಾರ್ ಎನ್ನುವವರು ರಸ್ತೆ ಅಪಘಾತದಲ್ಲಿ ಗಾಯಗೊಂಡು, ಇಲ್ಲಿ ಸ್ಪರ್ಶ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ವೈದ್ಯರು ಹೆಚ್ಚಿನ ಚಿಕಿತ್ಸೆ ಒದಗಿಸಿದರೂ ಚೇತರಿಸಿಕೊಳ್ಳಲಿಲ್ಲ. ಅವರ ಮಿದುಳು ನಿಷ್ಕ್ರಿಯಗೊಂಡಿರುವುದನ್ನು ಖಚಿತಪಡಿಸಿದ ವೈದ್ಯರು, ಕುಟುಂಬದ ಸದಸ್ಯರಿಗೆ ಅಂಗಾಂಗಗಳ ದಾನದ ಬಗ್ಗೆ ವಿವರಿಸಿದರು.
ಯುವಕನ ಅಂಗಾಂಗಗಳ ದಾನಕ್ಕೆ ಕುಟುಂಬದವರು ಸಮ್ಮತಿ ನೀಡಿದ ಬಳಿಕ, ರಾಜ್ಯ ಸರ್ಕಾರದ ಜೀವಸಾರ್ಥಕತೆ ಕಾರ್ಯಕ್ರಮದಡಿ ಹೆಸರು ನೋಂದಾಯಿಸಿಕೊಂಡವರಿಗೆ ಅಂಗಾಂಗಗಳನ್ನು ಒದಗಿಸಲಾಗಿದೆ.ಹೃದಯವನ್ನು ಮಣಿಪಾಲ್ ಆಸ್ಪತ್ರೆಗೆ ಸಾಗಿಸಿ, ಹೃದಯ ಸಮಸ್ಯೆ ಇರುವವರಿಗೆ ಕಸಿ ಮಾಡಲಾಗಿದೆ. ಯಕೃತ್ತು ಮತ್ತು ಎರಡು ಮೂತ್ರಪಿಂಡಗಳನ್ನು ಸ್ಪರ್ಶ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಸಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.