ಬೆಂಗಳೂರು: ‘ಪ್ರಸ್ತುತ ಕಾನೂನು ಪದವೀಧರರಿಗೆ ಹೆಚ್ಚಿನ ಅವಕಾಶಗಳು ಲಭ್ಯವಿದ್ದು, ಕಾನೂನು ಕಾಲೇಜುಗಳಲ್ಲಿ ವೃತ್ತಿಗೆ ಬೇಕಾದ ಸೌಲಭ್ಯಗಳೂ ಸಿಗುತ್ತಿವೆ’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ತಿಳಿಸಿದರು.
ನಗರದ ಕೆಎಲ್ಇ ಸೊಸೈಟಿ ಕಾನೂನು ಕಾಲೇಜು ಹಾಗೂ ಸಮು ತ್ಕರ್ಷ ಟ್ರಸ್ಟ್ ಶನಿವಾರ ಆಯೋಜಿಸಿದ್ದ ‘ನ್ಯಾಯಾಂಗ ಸೇವೆಗಳು: ಅವಕಾಶಗಳು ಮತ್ತು ಸವಾಲುಗಳು’ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ಹಿಂದೆ ಹೆಚ್ಚುವರಿ ಪದವಿಗಾಗಿ ಕಾನೂನು ಪದವಿಗೆ ಸೇರ್ಪಡೆಗೊಳ್ಳು ತ್ತಿದ್ದರು. ಈಗ ನ್ಯಾಯಾಂಗ ಕ್ಷೇತ್ರದ ಕೆಲಸ ಮಾಡಬೇಕೆಂಬ ಇಚ್ಛೆಯುಳ್ಳವರು ಮಾತ್ರ 5 ವರ್ಷದ ಪದವಿಗೆ ಸೇರುತ್ತಿದ್ದಾರೆ. ಇಂದಿನ ಕಾನೂನು ಕಾಲೇಜುಗಳಲ್ಲಿ ಕೋರ್ಟ್ಗಿಂತಲೂ ಹೆಚ್ಚಿನ ಸೌಲಭ್ಯಗಳಿವೆ. ಉತ್ತಮ ಉಪನ್ಯಾಸಕರು ಇದ್ದಾರೆ’ ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಮಾತ ನಾಡಿ, ‘ರಾಷ್ಟ್ರದಲ್ಲಿ 75 ವರ್ಷಗಳಷ್ಟು ಹಳೇ ಪ್ರಕರಣಗಳೂ ಇತ್ಯರ್ಥಕ್ಕೆ ಬಾಕಿ ಯಿವೆ. ಪ್ರಕರಣ ದಾಖಲಾಗಿ 30ರಿಂದ 40 ವರ್ಷಗಳಾದ ನಂತರ ತೀರ್ಪು ಪ್ರಕಟವಾಗಿ ಆರೋಪಿ ದೋಷಮುಕ್ತ ನಾದರೆ ಆತನ ಅಮೂಲ್ಯ ಸಮಯ ಹಾಳಾದಂತೆ ಅಲ್ಲವೇ’ ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಮಾತನಾಡಿ, ‘ನ್ಯಾಯದಾನ ದಲ್ಲಿ ತಾರತಮ್ಯ, ಜಾತೀಯತೆ, ಧರ್ಮದ ವಿಚಾರಗಳು ನುಸುಳಬಾರದು. ಸತ್ಯ ಹಾಗೂ ಸಕಾಲಿಕವಾಗಿ ತೀರ್ಪುಗಳು ಬರಬೇಕು’ ಎಂದರು.
ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಮಾತನಾಡಿ, ‘ಜನಸಂಖ್ಯೆಗೆ ತಕ್ಕಂತೆ ನ್ಯಾಯಾಧೀಶರ ನೇಮಕ ಆಗುತ್ತಿಲ್ಲ. ಇದರಿಂದ ನ್ಯಾಯಾಲಯಗಳಲ್ಲಿ ತೀರ್ಪು ಬರುವುದು ತಡವಾಗುತ್ತಿದೆ. ದೇಶದಲ್ಲಿ 4.7 ಕೋಟಿ ಪ್ರಕರಣಗಳು ಬಾಕಿಯಿವೆ. 25,628 ನ್ಯಾಯಾಧೀಶರ ಮಂಜೂರಾತಿ ಹುದ್ದೆಗಳಿವೆ. ಪ್ರಸ್ತುತ 20,174 ನ್ಯಾಯಾಧೀಶರು ಕರ್ತವ್ಯ ನಿರ್ವಹಿಸುತ್ತಿದ್ದು, 2019ರ ವೇಳೆಗೆ 35,155 ಸಾವಿರಕ್ಕೆ ಏರಿಕೆ ಆಗಬೇಕಿತ್ತು. ಅದು ಸಾಧ್ಯವಾಗಿಲ್ಲ. 2040ರ ವೇಳೆಗೆ 75,595 ಸಾವಿರ ನ್ಯಾಯಾಧೀಶರ ಅವ ಶ್ಯಕತೆ ಇದೆ. ಪ್ರತಿವರ್ಷ 2,075 ಮಂದಿ ನೇಮಕಗೊಳ್ಳಬೇಕಿದೆ’ ಎಂದರು.
ಹೈಕೋರ್ಟ್ ಮುಖ್ಯ ನ್ಯಾ. ಅಲೋಕ್ ಅರಾಧೆ ಅವರು ಕಾನೂನು ಕೈಪಿಡಿ ಬಿಡುಗಡೆ ಮಾಡಿದರು. ಪ್ರಾಂಶುಪಾಲ ಡಾ.ಜೆ.ಎಂ.ಮಲ್ಲಿಕಾರ್ಜುನಯ್ಯ, ಸಮುತ್ಕರ್ಷ ಟ್ರಸ್ಟ್ನ ಸದಸ್ಯ ಕಾರ್ಯದರ್ಶಿ ಶ್ರೀಧರ್ ಪ್ರಭು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.