ADVERTISEMENT

ಸಕ್ಕರೆ ಕಾರ್ಖಾನೆಗಳಿಂದಲೂ ಆಮ್ಲಜನಕ ಉತ್ಪಾದನೆ

ಮಹಾರಾಷ್ಟ್ರದಲ್ಲಿ ಪ್ರಯತ್ನ; ರಾಜ್ಯದಲ್ಲೂ ಚರ್ಚೆ ಆರಂಭ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 21:18 IST
Last Updated 28 ಏಪ್ರಿಲ್ 2021, 21:18 IST
ಎನ್‌ಎಸ್‌ಯು ಕಚೇರಿಯಿಂದ ಆಹಾರ ಪೂರೈಕೆ
ಎನ್‌ಎಸ್‌ಯು ಕಚೇರಿಯಿಂದ ಆಹಾರ ಪೂರೈಕೆ   

ಬೆಂಗಳೂರು: ಕೋವಿಡ್‌ ರೋಗಿಗಳಿಗೆ ವೈದ್ಯಕೀಯ ಆಮ್ಲಜನಕ ಕೊರತೆ ಉಂಟಾಗಿರುವ ಬೆನ್ನಲ್ಲೇ ನೆರೆಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಯೊಂದು ವೈದ್ಯಕೀಯ ಆಮ್ಲಜನಕ ಉತ್ಪಾದನೆಗೆ ಮುಂದಾಗಿದ್ದು, ಕರ್ನಾಟಕದಲ್ಲೂ ಇಂತಹ ಪ್ರಯತ್ನ ಆರಂಭಿಸಬಹುದೇ ಎಂಬ ಚರ್ಚೆ ಶುರುವಾಗಿದೆ.

ರಾಜ್ಯದಲ್ಲಿ 70 ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ. ಕೆಲವು ಕಾರ್ಖಾನೆಗಳಾದರೂ ವೈದ್ಯಕೀಯ ಆಮ್ಲಜನಕ ತಯಾರಿಸಿದರೆ ಕೋವಿಡ್‌ಗೆ ನಿಯಂತ್ರಣಕ್ಕೆ ಸಹಕಾರಿ ಆಗಬಹುದು. ಇದರಿಂದ ಸಕ್ಕರೆ ಕಾರ್ಖಾನೆಯ ಸುತ್ತಮುತ್ತಲಿನ ಪಟ್ಟಣಗಳು ಮತ್ತು ನಗರಗಳಿಗೆ ಆಮ್ಲಜನಕವನ್ನು ಪೂರೈಸಬಹುದು. ಸಾಗಣೆಯ ಸಮಸ್ಯೆಯೂ ಇರುವುದಿಲ್ಲ ಎಂಬ ಅಭಿಪ್ರಾಯವೂ ಇದೆ.

ಮಹಾರಾಷ್ಟ್ರದ ಉಸ್ಮಾನಾಬಾದ್‌ನಲ್ಲಿ ಧಾರಾಶಿವ ಶುಗರ್‌ ಮಿಲ್ ವೈದ್ಯಕೀಯ ಗುಣಮಟ್ಟದ ಆಮ್ಲಜನಕ ಉತ್ಪಾದನೆಗೆ ಕೈಹಾಕಿದ್ದು ದಿನಕ್ಕೆ 20 ಟನ್‌ ಆಮ್ಲಜನಕವನ್ನು ಉತ್ಪಾದಿಸಲು ಉದ್ದೇಶಿಸಿದೆ. ಇದಕ್ಕಾಗಿ ಸಕ್ಕರೆ ಕಾರ್ಖಾನೆ ತನ್ನ ಎಥೆನಾಲ್‌ ಘಟಕವನ್ನು ಮಾರ್ಪಾಡು ಮಾಡಿ ಈ ಕಾರ್ಯಕ್ಕೆ ಕೈ ಹಾಕಿದೆ.

ADVERTISEMENT

ವಾತಾವರಣದಲ್ಲಿ ಬಿಡುಗಡೆಯಾಗುವ ಆಮ್ಲಜನಕವನ್ನು ಸೆಳೆದು ಸಂಸ್ಕರಿಸಿ ವೈದ್ಯಕೀಯ ಗುಣಮಟ್ಟದ ಆಮ್ಲಜನಕವನ್ನಾಗಿ ಪರಿವರ್ತಿಸುತ್ತದೆ. ಸಾಮಾನ್ಯ ಆಮ್ಲಜನಕವನ್ನು ವೈದ್ಯಕೀಯ ಆಮ್ಲಜನಕಾಗಿ ಪರಿವರ್ತಿಸುವ ಸಂಸ್ಕರಣಾ ಸಾಧನವನ್ನು ಅಳವಡಿಸಲಾಗಿದೆ. ಈ ಪ್ರಯತ್ನ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆ ವಲಯಲದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ವೈದ್ಯಕೀಯ ಆಮ್ಲಜನಕ ಇಂದು ಅತಿ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಸ್ವಾಗತಿಸುತ್ತೇವೆ. ಧಾರಾಶಿವ ಶುಗರ್‌ ಮಿಲ್ ಆಮ್ಲಜನಕ ಉತ್ಪಾದಿಸುವಲ್ಲಿ ಯಶಸ್ವಿಯಾದರೆ, ಮುಂದೆ ಹಲವು ಕಾರ್ಖಾನೆ ಆ ಮಾದರಿಯನ್ನು ಅನುಸರಿಸಬಹುದು ಎಂದು ಕೆಲವು ಸಕ್ಕರೆ ಕಾರ್ಖಾನೆಗಳು ಅಭಿಪ್ರಾಯಪಟ್ಟಿವೆ.

ರಾಜ್ಯದ ಕೆಲವು ಸಕ್ಕರೆ ಕಾರ್ಖಾನೆಗಳ ಆಡಳಿತ ವರ್ಗವನ್ನು ಸಂಪರ್ಕಿಸಿದಾಗ, ಇದೊಂದು ಹೊಸ ಪರಿಕಲ್ಪನೆ. ಅಲ್ಲಿಯ ಮಾಹಿತಿಯನ್ನು ತರಿಸಿಕೊಂಡು ಆ ಬಳಿಕ ಚಿಂತನೆ ನಡೆಸಲಾಗುವುದು. ಸಾರ್ವಜನಿಕರಿಗೆ ಅನುಕೂಲ ಆಗುವುದಾದರೆ ಪರಿಶೀಲಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು.‌

ಎನ್‌ಎಸ್‌ಯುಐನಿಂದ ಆಹಾರ ಪೂರೈಕೆ
ಬೆಂಗಳೂರು: ಕೋವಿಡ್‌ ಎರಡನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಹೇರಿರುವ 14 ದಿನಗಳ ಲಾಕ್‌ಡೌನ್‌ ಮಾದರಿಯ ಕರ್ಫ್ಯೂನಿಂದ ಸಂಕಷ್ಟಕ್ಕೀಡಾಗುವವರ ನೆರವಿಗೆ ಎನ್‌ಎಸ್‌ಯುಐ ಧಾವಿಸಿದೆ.

ಈ ಉದ್ದೇಶಕ್ಕಾಗಿ ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಜಯೇಂದ್ರ ಎಸ್‌. ಮತ್ತು ಸಂಘಟನೆಯ ಇತರ ಪದಾದಿಕಾರಿಗಳು, ನಗರದಲ್ಲಿರುವ ಎನ್‌ಎಸ್‌ಯುಐ ಕಚೇರಿಯಲ್ಲಿ ಬುಧವಾರ ಅಡುಗೆ ಕೋಣೆ ಆರಂಭಿಸಿದ್ದಾರೆ.

ಆಸ್ಪತ್ರೆಗಳು, ಆಂಬುಲೆನ್ಸ್‌ಗಳು, ಚಿತಾಗಾರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಸೇರಿದಂತೆ ಕೋವಿಡ್‌ ಕಾರ್ಯದಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡವರಿಗೆ ಇಲ್ಲಿಂದ ಆಹಾರ ಪೂರೈಸಲು ಅವರು ತೀರ್ಮಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.