ಬೆಂಗಳೂರು: ಡಿಜಿಟಲ್ ಪರಿವರ್ತನೆಯ ಮೂಲಕ ಗ್ರಾಮ ಪಂಚಾಯತಿಗಳ ಸಾಮರ್ಥ್ಯ ವೃದ್ಧಿಗಾಗಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ (ಎನ್ಎಲ್ಟಿ- ನ್ಯಾವಿಗೇಟೆಡ್ ಲರ್ನಿಂಗ್ ಟೆಕ್ನಾಲಜಿ) ಮತ್ತು ಇತರ ಸೀಮಾತೀತ ತಂತ್ರಜ್ಞಾನಗಳನ್ನು ಬಳಸುವ ಯೋಜನೆಯನ್ನು ರಾಜ್ಯದ ಮುಂದಿನ ಬಜೆಟ್ನಲ್ಲಿ ಅಳವಡಿಸಲು ಪ್ರಯತ್ನಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ಭರವಸೆ ನೀಡಿದರು.
ನಗರದ ಅರಮನೆ ಮೈದಾನದ ಕೆ.ಸಿ. ಕ್ಲಬ್ ಆವರಣದಲ್ಲಿ ಕೃಷಿ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ‘ಅಗ್ರಿ ಬೆಸ್ಟ್ ಕ್ಲಬ್-75ʼರಲ್ಲಿ ಮಾತನಾಡಿದ ಅವರು, ಈ ಬಗ್ಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್ಡಿಪಿಆರ್) ಸಚಿವರ ಜೊತೆಗೂ ಚರ್ಚಿಸುವುದಾಗಿ ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘವು ಇಂಥ ವಿಚಾರಗಳನ್ನು ತನ್ನ ಕಾರ್ಯಕ್ಷೇತ್ರದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಸಂಪೂರ್ಣ ಸ್ವರಾಜ್ ಫೌಂಡೇಶನ್ ಸಂಸ್ಥಾಪಕ ಹಾಗೂ ನಿರ್ವಾಹಕ ಟ್ರಸ್ಟಿ ಶಂಕರ ಕೆ. ಪ್ರಸಾದ್ ಮಾತನಾಡಿ, ‘ಎನ್ಎಲ್ಟಿ ಯಂತಹ ಉಪಕ್ರಮಗಳು ಗ್ರಾಮೀಣ ಸಮುದಾಯಗಳಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತವೆ’ ಎಂದು ಹೇಳಿದರು.
ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಎನ್.ಗೋಪಾಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.