ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿ ನಾಗರಾಜ್ ಅಲಿಯಾಸ್ ನಾಗ್ ಎಂಬಾತನಿಗೆ ಆತನ ಪತ್ನಿ ತಂದುಕೊಟ್ಟಿದ್ದ ಬಿರಿಯಾನಿಯಲ್ಲಿ 420 ಗ್ರಾಂ ಗಾಂಜಾ ಪತ್ತೆಯಾಗಿದೆ.
‘ಕಾರಾಗೃಹದ ಅಧೀಕ್ಷಕ ಪಿ.ಎಸ್.ರಮೇಶ್ ನೀಡಿರುವ ದೂರಿನನ್ವಯ ನಾಗ್ನ ಪತ್ನಿ ಪವಿತ್ರಾ ಹಾಗೂ ತಂದೆ ವರದರಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಬ್ಬರು ಸದ್ಯ ತಲೆಮರೆಸಿಕೊಂಡಿದ್ದಾರೆ’ ಎಂದುಪರಪ್ಪನ ಅಗ್ರಹಾರ ಪೊಲೀಸರು ಹೇಳಿದರು.
‘ವರ್ತೂರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಆರೋಪಿ ನಾಗ್ನನ್ನು ಬಂಧಿಸಿದ್ದ ಪೊಲೀಸರು, 2018 ಜೂನ್ನಲ್ಲಿ ಜೈಲಿಗೆ ಕಳುಹಿಸಿದ್ದರು. ಆತನ ವಿಶೇಷ ಸಂದರ್ಶನಕ್ಕಾಗಿ ಪತ್ನಿ ಹಾಗೂ ತಂದೆ, ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಒಪ್ಪಿಗೆ ನೀಡಿದ್ದ ಜೈಲಿನ ಅಧಿಕಾರಿಗಳು, ಮೇ 8ರಂದು ಸಂಜೆ ಭೇಟಿಗೆ ಅವಕಾಶ ಕಲ್ಪಿಸಿದ್ದರು.’
‘ನಾಗ್ನನ್ನು ಭೇಟಿಯಾಗಿದ್ದ ಪತ್ನಿ ಹಾಗೂ ತಂದೆ, ತಿಂಡಿ– ತಿನಿಸು ಹಾಗೂ ಬಿರಿಯಾನಿ ಎಂದು ಹೇಳಿ ಚೀಲವೊಂದನ್ನು ಕೊಟ್ಟು ವಾಪಸು ಹೋಗಿದ್ದರು. ಚೀಲವನ್ನು ಜೈಲಿನ ಸಿಬ್ಬಂದಿ ತಪಾಸಣೆ ನಡೆಸಿದಾಗ, ಎರಡು ಡಬ್ಬಿಗಳ ಕೆಳಭಾಗದಲ್ಲಿ ಗಾಂಜಾ ಬಚ್ಚಿಟ್ಟು ಮೇಲ್ಭಾಗದಲ್ಲಿ ಬಿರಿಯಾನಿ ಇರಿಸಿದ್ದು ಪತ್ತೆಯಾಯಿತು. ಗಾಂಜಾ ಪತ್ತೆಯಾಗುತ್ತಿದ್ದಂತೆ, ಅದನ್ನು ಜಪ್ತಿ ಮಾಡಿ ರಮೇಶ್ ಅವರು ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.