ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಪ್ರಮುಖರಾದ ವಿ.ಕೆ. ಶಶಿಕಲಾ ನಟರಾಜನ್, ’ನನ್ನ ಬಿಡುಗಡೆ ಹಾಗೂ ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಮೂರನೇ ವ್ಯಕ್ತಿಗೆ ನೀಡಬೇಡಿ’ ಎಂದು ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಪತ್ರ ಬರೆದಿದ್ದಾರೆ.
ಶಶಿಕಲಾ ಅವರ ಬಿಡುಗಡೆ ಬಗ್ಗೆ ಮಾಹಿತಿ ಕೋರಿ ಟಿ.ನರಸಿಂಹಮೂರ್ತಿ ಎಂಬುವವರು ಇತ್ತೀಚೆಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಉತ್ತರಿಸಿದ್ದ ಕಾರಾಗೃಹ ಇಲಾಖೆ, ‘ಶಶಿಕಲಾಗೆ ವಿಧಿಸಿರುವ ದಂಡದ ಮೊತ್ತ ₹ 10 ಕೋಟಿ ಪಾವತಿಸಿದರೆ, ಜನವರಿ 27ರಂದು ಬಿಡುಗಡೆಯಾಗಲಿದ್ದಾರೆ. ಒಂದು ವೇಳೆ ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ ಒಂದು ವರ್ಷ ಜೈಲಿನಲ್ಲೇ ಇರಬೇಕಾಗುತ್ತದೆ. ಆಗ 2022ರ ಫೆ. 27ರಂದು ಬಿಡುಗಡೆಯಾಗಲಿದ್ದಾರೆ' ಎಂದು ಮಾಹಿತಿ ನೀಡಿತ್ತು.
ತಮ್ಮ ಬಿಡುಗಡೆ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಉಲ್ಲೇಖಿಸಿ ಶಶಿಕಲಾ ಅವರು ಮುಖ್ಯ ಅಧೀಕ್ಷಕರಿಗೆ ಪತ್ರ ಬರೆದಿದ್ದಾರೆ. ‘ನನ್ನ ಬಗ್ಗೆ ಮಾಹಿತಿ ಕೋರಿ ಹಲವರು ಅರ್ಜಿ ಸಲ್ಲಿಸುತ್ತಿರುವುದು ಗೊತ್ತಾಗಿದೆ. ನನ್ನ ಅನುಮತಿ ಇಲ್ಲದೇ ಯಾರಿಗೂ ಮಾಹಿತಿ ನೀಡಬೇಡಿ’ ಎಂದಿರುವ ಶಶಿಕಲಾ, ಅದಕ್ಕೆ ಸಂಬಂಧಪಟ್ಟ ನ್ಯಾಯಾಲಯದ ಆದೇಶಗಳನ್ನೂ ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.