ಪೀಣ್ಯ ದಾಸರಹಳ್ಳಿ: 'ರಾಜ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಸುಧಾರಣೆ ತಂದು ದೇಶದಲ್ಲೇ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ರಾಜ್ಯ ಎಂಬಂತೆ ಮಾಡುವ ಪ್ರಯತ್ನ ನಡೆದಿದೆ' ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.
ಬಾಗಲಗುಂಟೆಯ ಕೋವಿಡ್ ಸಹಾಯವಾಣಿ ಕೇಂದ್ರಕ್ಕೆ ಆಮ್ಲಜನಕ ಸಾಂದ್ರಕಗಳನ್ನು ವಿತರಿಸಿ ಮಾತನಾಡಿದರು.
'ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಸುಧಾರಣೆಯಾಗಿ ಕ್ರಾಂತಿಕಾರಿ ಪರಿಣಾಮ ಬೀರಿದೆ. ನಮ್ಮ ದೇಶದಲ್ಲಿ ವ್ಯಾಕ್ಸಿನ್ ತಯಾರಿಕೆ ಮಾಡಿ 23 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ’ ಎಂದರು.
‘ಈಗಾಗಲೇ ಬಿಜೆಪಿ ಸರ್ಕಾರವು ದಾಸರಹಳ್ಳಿ ಕ್ಷೇತ್ರಕ್ಕೆ ಸರ್ಕಾರಿ ಪದವಿ ಕಾಲೇಜು ನೀಡಿದೆ. ಅದರಂತೆಯೇ 100 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆಯನ್ನು ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಎಸ್. ಮುನಿರಾಜು ಮಾತನಾಡಿ, ‘ಸೇವಾ ಸಪ್ತಾಹ ಎಂಬ ಸಾಮಾಜಿಕ ಸೇವೆ ಅಡಿಯಲ್ಲಿ ಮುಖಂಡರು ಪ್ರತಿನಿತ್ಯ ಬಡವರ ಹಾಗೂ ಕೋವಿಡ್ ರೋಗಿಗಳ ಸೇವೆ ಮಾಡುತ್ತಿದ್ದಾರೆ’ ಎಂದರು.
ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ಎನ್.ಲೋಕೇಶ್ ಅವರು ಬಾಗಲಗುಂಟೆ ಪೊಲೀಸ್ ಠಾಣೆಗೆ ಸುಮಾರು ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡವನ್ನು ಅಶ್ವತ್ಥ ನಾರಾಯಣ ವೀಕ್ಷಿಸಿದರು. ಬಳಿಕ ದಾಸರಹಳ್ಳಿ ಆರೋಗ್ಯ ಕೇಂದ್ರಕ್ಕೆ ತೆರಳಿ ಆಸ್ಪತ್ರೆ ಸಿಬ್ಬಂದಿಗೆ ಊಟ ನೀಡುವ ಕಾರ್ಯಕ್ಕೆ ಚಾಲನೆ ನೀಡಿದರು.
ಬಿಜೆಪಿ ಪ್ರಧಾನಕಾರ್ಯದರ್ಶಿಗಳಾದ ಟಿ.ಶಿವಕುಮಾರ್, ಪಿ.ಎಚ್.ರಾಜು, ವಿನೋದ್ ಗೌಡ, ಬಿಜೆಪಿ ಮುಖಂಡರಾದ ನಾಗಣ್ಣ, ಕೃಷ್ಣಮೂರ್ತಿ, ರವಿಗೌಡ, ಸಂದೀಪ್ ಸಿಂಗ್, ಎಸಿಪಿ ಶ್ರೀನಿವಾಸ್ ರೆಡ್ಡಿ, ಇನ್ಸ್ಪೆಕ್ಟರ್ ಸುನೀಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.