ADVERTISEMENT

ಪ್ರಜೆಯೇ ಸರ್ಕಾರದ ಮಾಲೀಕ: ಬೊಮ್ಮಾಯಿ

ವಿಶ್ವ ಮಹಿಳಾ ದಿನಾಚರಣೆ, ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 20:55 IST
Last Updated 20 ಮಾರ್ಚ್ 2023, 20:55 IST
ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಹೇಮಲತಾ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ಆರೋಗ್ಯ ಸಂಜೀವಿನಿ ಕಾರ್ಡ್ ವಿತರಿಸಿದರು. ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ, ಇದ್ದರು– ಪ್ರಜಾವಾಣಿ ಚಿತ್ರ.
ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಹೇಮಲತಾ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ಆರೋಗ್ಯ ಸಂಜೀವಿನಿ ಕಾರ್ಡ್ ವಿತರಿಸಿದರು. ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ, ಇದ್ದರು– ಪ್ರಜಾವಾಣಿ ಚಿತ್ರ.   

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಯೇ ಸರ್ಕಾರದ ಮಾಲೀಕ. ಅವರು ನೀಡುವ ತೆರಿಗೆ ಹಣದಿಂದಲೇ ನೌಕರರಿಗೆ ವೇತನ. ಅವರು ಕಚೇರಿಗೆ ಬಂದಾಗ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತ್ಯಕ್ಷವಾಗಿ, ಪರೋಕ್ಷವಾಗಿ ತೆರಿಗೆ ನೀಡುವ ಜನರೇ ಸರ್ಕಾರದ ನಿಜವಾದ ಮಾಲೀಕರು. ಆಡಳಿತ ವ್ಯವಸ್ಥೆ ರೂಪಿತವಾಗಿರುವುದೇ ಜನಸಾಮಾನ್ಯರಿಗೆ. ಮಹಿಳೆಯರು, ಮಕ್ಕಳು, ದುರ್ಬಲರಿಗೆ ಯೋಜನೆ ರೂಪಿಸಲು, ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಲು ಇದರಿಂದ ಸಾಧ್ಯವಾಗಿದೆ ಎಂದರು.

ADVERTISEMENT

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಎರಡು ಚಕ್ರಗಳು, ಎರಡೂ ಚಕ್ರಗಳು ಒಟ್ಟಿಗೆ, ಒಂದೇ ದಿಕ್ಕಿನಲ್ಲಿ, ಒಂದೇ ವೇಗದಲ್ಲಿ ಸಾಗಿದರೆ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ. ಕಾರ್ಯಾಂಗದ ಒಂದು ಭಾಗವಾಗಿರುವ ನೌಕರರರು ಪ್ರಾಮಾಣಿಕವಾಗಿ, ನಿಷ್ಠೆಯಿಂದ ನಿತ್ಯವೂ ಒಂದು ತಾಸು ಹೆಚ್ಚಿನ ಅವಧಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಭೈರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಸಿಬ್ಬಂದಿ ಮತ್ತು ಸುಧಾರಣಾ ಇಲಾಖೆ ಕಾರ್ಯದರ್ಶಿ ಹೇಮಲತಾ, ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್, ರಜನೀಶ್‌ ಗೋಯಲ್‌ ಉಪಸ್ಥಿತರಿದ್ದರು.

ಈಗಾಗಲೇ ದೊಡ್ಡ ಸನ್ಮಾನ ಆಗಿದೆಯಲ್ಲ?

ನೌಕರರ ಸಂಘ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊ ಮ್ಮಾಯಿ, ಈಗ ಸನ್ಮಾನ ಏಕೆ? 20 ದಿನಗಳ ಹಿಂದೆ ದೊಡ್ಡ ಸನ್ಮಾನವನ್ನೇ ಮಾಡಿದ್ದೀರಲ್ಲ. ಆ ಸನ್ಮಾನದ ಮುಂದೆ ಈ ಸಣ್ಣ ಸನ್ಮಾನ ಏಕೆ? ಎಲ್ಲ ಸನ್ಮಾನ ಸ್ವೀಕರಿಸುವ ಗುಣ ಬದುಕಿನಲ್ಲಿ ಸಹಜ ಎನ್ನುವ ಮೂಲಕ ನೌಕರರು ನಡೆಸಿದ್ದ ಮುಷ್ಕರದ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.