ಬೆಂಗಳೂರು: ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ ಮೂಲಕ ಮೈಸೂರು ರಸ್ತೆವರೆಗೆ ಪೆರಿಫೆರಲ್ ವರ್ತುಲ ರಸ್ತೆ–2 ( ಬೆಂಗಳೂರು ಬ್ಯುಸಿನೆಸ್ ಕಾರಿಡಾರ್) ನಿರ್ಮಿಸಲು ಸಜ್ಜಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವು, ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಗ್ರಾಮಗಳ ಭೂ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ.
100 ಮೀಟರ್ ಅಗಲದಲ್ಲಿ 30 ಕಿ.ಮೀ. ಉದ್ದ ನಿರ್ಮಾಣವಾಗುವ ಈ ಕಾರಿಡಾರ್ನ ಎರಡೂ ಬದಿಯಲ್ಲಿ ತಲಾ 24 ಮೀಟರ್ ವಾಣಿಜ್ಯ ನಿವೇಶನ ರಚಿಸಲಾಗುತ್ತದೆ. ಈ ವಾಣಿಜ್ಯ ಪ್ರದೇಶವನ್ನು ಮಾರಾಟ ಮಾಡಿ ವ್ಯವಹಾರಕ್ಕೆ ಉತ್ತೇಜನ ನೀಡಲಾಗುತ್ತದೆ.
ದಾಸನಪುರ ಹೋಬಳಿ ವ್ಯಾಪ್ತಿಯ ದೊಂಬರಹಳ್ಳಿ, ಮಾಚೋಹಳ್ಳಿ, ವಡ್ಡರಹಳ್ಳಿ, ಲಕ್ಷ್ಮೀಪುರ, ಕದರೇನಹಳ್ಳಿ, ಹಾರೊಕ್ಯಾತನಹಳ್ಳಿ, ಸಿದ್ದನಹೊಸಹಳ್ಳಿ, ಮಾದನಾಯಕನಹಳ್ಳಿ ಗ್ರಾಮಗಳ ಭೂಮಾಲೀಕರಿಗೆ ವಿಶೇಷ ಭೂಸ್ವಾಧೀನಾಧಿಕಾರಿ ನೋಟಿಸ್ ಜಾರಿ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
‘2006ರಲ್ಲಿ ಬಿಡಿಎ ಅಧಿಸೂಚನೆ ಹೊರಡಿಸಿ, 30 ದಿನದೊಳಗೆ ಸೂಕ್ತ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿತ್ತು. ಆದಾದ ಬಳಿಕ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಲಾಗಿದ್ದು, ಕೆಲವರು ನಿವೇಶನ ಮಾಡಿ ಮಾರಾಟ ಮಾಡಿ ಹೋಗಿದ್ದಾರೆ. ಸಾವಿರಾರು ಮನೆಗಳು ನಿರ್ಮಾಣವಾಗಿದ್ದು, ಮನೆ ಕಳೆದುಕೊಂಡು ಎಲ್ಲಿಗೆ ಹೋಗಬೇಕು’ ಎಂದು ಆಸ್ತಿಗಳ ಮಾಲೀಕರು ಪ್ರಶ್ನಿಸಿದ್ದಾರೆ.
‘ಮನೆ ಕಟ್ಟಲು ಅನುಮತಿ ನೀಡಿ, ನೀರು, ವಿದ್ಯುತ್ ಸಂಪರ್ಕವನ್ನು ಕಾನೂನು ಪ್ರಕಾರವೇ ನೀಡಲಾಗಿದೆ. ಕಂದಾಯ ಸಹ ಪಾವತಿಸಲಾಗಿದೆ. ಈಗ ಜಮೀನಿನ ಮಾಲೀಕರಿಗೆ ನೋಟೀಸ್ ನೀಡಿದ್ದಾರೆ. ದಿಕ್ಕು ತೋಚುತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.
‘ದಾಸನಪುರ ಹೋಬಳಿಯ ಆಲೂರು, ಅಡಕಮಾರನಹಳ್ಳಿ, ದೊಂಬರಹಳ್ಳಿ, ಲಕ್ಷ್ಮಿಪುರ ಮಾದವಾರ, ದಾಸನಪುರ, ಚಿಕ್ಕಬಿದರಕಲ್ಲು, ಭೋವಿ ಪಾಳ್ಯದ ಸಾವಿರಾರು ಸರ್ವೆ ನಂಬರ್ಗಳ ಭೂ ಮಾಲೀಕರಿಗೆ ನೋಟೀಸ್ ನೀಡಲಾಗಿದೆ. ಸರ್ಕಾರ 2006ರಲ್ಲಿಯೇ ಈ ಪ್ರದೇಶದಲ್ಲಿ ರಸ್ತೆ, ಬಿಎಂಟಿಸಿ ಡಿಪೊ ಮತ್ತು ಟ್ರಕ್ ಟರ್ಮಿನಲ್ ನಿರ್ಮಿಸುವ ನಿರ್ಧಾರ ಕೈಗೊಂಡಿದ್ದರೆ ಈ ಸರ್ವೆ ನಂಬರ್ಗಳನ್ನು ಬ್ಲಾಕ್ ಮಾಡಬೇಕಾಗಿತ್ತು. ಈಗ ನೋಟೀಸ್ ನೀಡಿ ಗೊಂದಲ ಸೃಷ್ಟಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸರ್ಕಾರ ನಮ್ಮ ಮನವಿ ಆಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ದಾಸನಪುರ ಹೋಬಳಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ, ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
ರೈತರ ಮನವೊಲಿಸಿ: ಡಿಕೆಶಿ
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ಭೂಮಿ ನೀಡುವ ರೈತರ ಮನವೊಲಿಕೆ ಮಾಡಿ ಪರಿಹಾರವನ್ನು ನಿಗದಿಗೊಳಿಸುವಂತೆ ಬಿಡಿಎ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.
‘ಪರಿಹಾರ ವಿಚಾರದಲ್ಲಿ ಕಾನೂನು ಹೋರಾಟ ಆರಂಭವಾಗಿ ಯೋಜನೆ ವಿಳಂಬವಾಗುವುದು ಬೇಡ. ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಹೇಳಿದ್ದಾರೆ. ‘ಸದ್ಯದ ಮಾಹಿತಿ ಪ್ರಕಾರ ಯೋಜನೆಗೆ ಭೂಮಿ ನೀಡುವ ರೈತರಿಗೆ ಎಕರೆಗೆ ₹1.5 ಕೋಟಿಯಿಂದ ₹ 8 ಕೋಟಿವರೆಗೂ ಪರಿಹಾರ ದೊರೆಯಲಿದೆ. ಆದರೆ ಜಮೀನು ಯಾವ ಪ್ರದೇಶದಲ್ಲಿ ಎಂಬುದರ ಮೇಲೆ ಪರಿಹಾರದ ಮೊತ್ತ ಎಷ್ಟು ಎಂಬುದು ತೀರ್ಮಾನವಾಗಲಿದೆ. ಸರ್ಕಾರದ ಮಾರ್ಗಸೂಚಿ ದರದ ಮೇಲೆ ಪರಿಹಾರ ನೀಡಲಾಗುವುದು’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.