ಬೆಂಗಳೂರು: ಅಮೃತಹಳ್ಳಿ ಠಾಣೆ ವ್ಯಾಪ್ತಿಯ ವಿನಾಯಕ್ ನಗರದ ಮನೆಯೊಂದಕ್ಕೆ ನುಗ್ಗಿದ್ದ ದುಷ್ಕರ್ಮಿಯೊಬ್ಬ, ಮಹಿಳೆಯ ಮೇಲೆ ಪೆಟ್ರೋಲ್ ಎರಚಿ ಚಿನ್ನಾಭರಣ ಸುಲಿಗೆ ಮಾಡಿದ್ದಾನೆ.
ಘಟನೆ ಸಂಬಂಧ ಸ್ಥಳೀಯ ನಿವಾಸಿ ಆಶಾ ರಾಜ್ ಎಂಬುವರು ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
‘ಇದೇ 11ರಂದು ರಾತ್ರಿ 7ರ ಸುಮಾರಿಗೆ ತರಕಾರಿ ತರಲು ಹೊರಗೆ ಹೋಗಲೆಂದು ಆಶಾ ರಾಜ್ ಅವರು ಮನೆಯ ಮುಖ್ಯಬಾಗಿಲು ತೆರದಿದ್ದರು. ಅದೇ ವೇಳೆಯೇ ಒಳಗೆ ನುಗ್ಗಿದ್ದ ದುಷ್ಕರ್ಮಿ, ಮೈ ಮೇಲೆ ಪೆಟ್ರೋಲ್ ಎರಚಿದ್ದ. ಬೆಂಕಿ ಪೊಟ್ಟಣವನ್ನು ಕೈಯಲ್ಲಿ ಹಿಡಿದು, ಬೆಂಕಿ ಕಡ್ಡಿ ಗೀರುವುದಾಗಿ ಬೆದರಿಸಲಾರಂಭಿಸಿದ್ದ. ಈ ಸಂಗತಿಯನ್ನು ಆಶಾ ರಾಜ್ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಜೀವ ಬೆದರಿಕೆಯೊಡ್ಡುತ್ತಲೇ ಆರೋಪಿ ಮಹಿಳೆಯ ₹ 4 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಸುಲಿಗೆ ಮಾಡಿದ್ದ. ನಂತರ, ಮನೆಯಿಂದ ಪರಾರಿಯಾಗಿದ್ದಾನೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.