ಬೆಂಗಳೂರು: ಫೋನ್ ಪೇ ಮೂಲಕ ಸಂದಾಯವಾಗದ ₹ 5 ಸಾವಿರವನ್ನು ವಾಪಸು ಪಡೆಯಲು ಹೋಗಿ ನಗರದ ನಿವಾಸಿಯೊಬ್ಬರು ₹ 3 ಲಕ್ಷ ಕಳೆದುಕೊಂಡಿದ್ದಾರೆ.
ವಂಚನೆಗೀಡಾಗಿರುವ ಮಹದೇವಪುರದ 29 ವರ್ಷದ ವ್ಯಕ್ತಿ ದೂರು ನೀಡಿದ್ದಾರೆ. ಆರೋಪಿ ರಾಜು ರೈ ಎಂಬಾತನ ವಿರುದ್ಧ ವೈಟ್ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ದೂರುದಾರ ತಮ್ಮ ಸ್ನೇಹಿತನಿಗೆ ಫೋನ್ಪೇ ಮೂಲಕ ₹ 5 ಸಾವಿರ ವರ್ಗಾಯಿಸಿದ್ದರು. ಆದರೆ, ಸ್ನೇಹಿತನಿಗೆ ಹಣ ಸಂದಾಯವಾಗಿರಲಿಲ್ಲ. ಸಂದಾಯವಾಗದ ಹಣವನ್ನು ವಾಪಸು ಪಡೆಯಲು ದೂರುದಾರ ಮುಂದಾಗಿದ್ದರು. ಗೂಗಲ್ ಜಾಲತಾಣದಲ್ಲಿ ಹುಡುಕಾಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಸಹಾಯವಾಣಿ ನಂಬರ್ ಪಡೆದಿದ್ದರು. ಅದಕ್ಕೆ ಕರೆ ಮಾಡಿ ಮಾತನಾಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಬ್ಯಾಂಕ್ ಪ್ರತಿನಿಧಿಗಳ ಸೋಗಿನಲ್ಲಿ ಮಾತನಾಡಿದ್ದ ಆರೋಪಿ, ಬ್ಯಾಂಕ್ ಖಾತೆ ವಿವರ ಹಾಗೂ ಒಟಿಪಿ (ಒನ್ ಟೈಂ ಪಾಸ್ವರ್ಡ್) ಪಡೆದಿದ್ದ. ಅದಾದ ನಂತರ ದೂರುದಾರರ ಎಸ್ಬಿಐ ಖಾತೆಯಿಂದ ಹಂತ ಹಂತವಾಗಿ ₹ 3 ಲಕ್ಷ ವರ್ಗಾಯಿಸಿಕೊಂಡಿದ್ದಾನೆ. ಹಣವನ್ನು ವಾಪಸು ಕೇಳಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಮೊಬೈಲ್ ಸಹ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಈ ಸಂಗತಿ ದೂರಿನಲ್ಲಿದೆ’ ಎಂದೂ ಮೂಲಗಳು ತಿಳಿಸಿವೆ.
‘ಆರೋಪಿಗಳು, ಗೂಗಲ್ನಲ್ಲಿ ಎಸ್ಬಿಐ ಸಹಾಯವಾಣಿ ಸಂಖ್ಯೆಯನ್ನು ತಿದ್ದುಪಡಿ ಮಾಡಿದ್ದಾರೆ. ಅದನ್ನು ನಂಬಿ ಕರೆ ಮಾಡುವ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆ ಗೂಗಲ್ ಆಡಳಿತ ಮಂಡಳಿಗೂ ಇ–ಮೇಲ್ ಕಳುಹಿಸಲಾಗಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.