ಬೆಂಗಳೂರು: ‘ಪಾಲಿಕೆಯ ಮುಂದಿನ ಬಜೆಟ್ನಲ್ಲಿ ಛಾಯಾಗ್ರಾಹಕರ ಸಂಘಕ್ಕೆ ಅನುದಾನ ನೀಡುವ ಬಗ್ಗೆ ಹಣಕಾಸು ವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಛಾಯಾಗ್ರಾಹಕರಿಗೆ ಆರೋಗ್ಯ ಚೀಟಿ (ಹೆಲ್ತ್ ಕಾರ್ಡ್) ವಿತರಿಸುವ ಬಗ್ಗೆಯೂ ಚರ್ಚೆ ಮಾಡಲಾಗುವುದು’ ಎಂದು ಮೇಯರ್ ಗಂಗಾಂಬಿಕೆ ಭರವಸೆ ನೀಡಿದರು.
ಬೆಂಗಳೂರು ಛಾಯಾಗ್ರಾಹಕರ ಸಂಘವು ಆಯೋಜಿಸಿದ್ದ‘ವಿಶ್ವ ಛಾಯಾಗ್ರಹಣ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಛಾಯಾಗ್ರಾಹಕರಿಂದ ನಮ್ಮ ಜೀವನದ ಮರೆಯಲಾರದ ಕ್ಷಣಗಳು ಸೆರೆಯಾಗುತ್ತವೆ. ಎಷ್ಟೇ ವರ್ಷಗಳು ಕಳೆದರೂ ಚಿತ್ರಗಳು ಹಳೆಯ ನೆನಪುಗಳಿಗೆ ಸಾಕ್ಷಿಯಾಗಿರುತ್ತವೆ. ಇಂತಹ ಅದ್ಭುತ ಕ್ಷಣಗಳನ್ನು ಸೆರೆಹಿಡಿಯುವಛಾಯಾಗ್ರಾಹಕರ ಸಂಕಷ್ಟಗಳ ಬಗ್ಗೆಯೂ ನನಗೆ ಅರಿವಿದೆ. ನಿಮ್ಮ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬಹುದು’ ಎಂದರು.
ಉಪಮೇಯರ್ ಭದ್ರೇಗೌಡ, ‘ಹವ್ಯಾಸಿ ಛಾಯಾಗ್ರಾಹಕರಿಗೆ ಹೋಲಿಸಿದರೆ ಪತ್ರಿಕಾ ಛಾಯಾಗ್ರಾಹಕರಿಗೆ ಸ್ವಾತಂತ್ರ್ಯ ಕಡಿಮೆ ಇರುತ್ತದೆ. ಅವರು ತಮ್ಮ ಕುಟುಂಬದವರ ಸಮಸ್ಯೆಗಳಿಗೆ ಸ್ಪಂದಿಸಲು ಹೆಚ್ಚು ಸಮಯವೂ ಇರುವುದಿಲ್ಲ. ಅವರಿಗೆ ಆರ್ಥಿಕ ಸಮಸ್ಯೆ ಹೆಚ್ಚಾಗಿದೆ. ಇವರಿಗೆ ನೆರವು ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು’ ಎಂದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ತಂತ್ರಜ್ಞ ನರಸಿಂಹ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.
‘ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಛಾಯಾಚಿತ್ರ ಪತ್ರಿಕೋದ್ಯಮದ ಮುಂದಿರುವ ಸವಾಲುಗಳು’ ವಿಚಾರಸಂಕಿರಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್ ಮಾತನಾಡಿದರು.
‘ಅಪರಾಧ ಪ್ರಕರಣಗಳಲ್ಲಿ ಹೇಳಿಕೆಗಳಿಗಿಂತ ಚಿತ್ರಗಳು ಹೆಚ್ಚು ದೃಢತೆ ಹೊಂದಿರುತ್ತವೆ ಎಂದು ಸೈಬರ್ ಕ್ರೈಂ ವಿಭಾಗದ ಕೆ.ಎನ್.ಯಶವಂತಕುಮಾರ್ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.