ADVERTISEMENT

ಎರಡು ವರ್ಷದ ಬಳಿಕ ಭೌತಿಕ ‘ಕಾವ್ಯ ಉತ್ಸವ’

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2022, 19:32 IST
Last Updated 21 ಆಗಸ್ಟ್ 2022, 19:32 IST
.
.   

ಬೆಂಗಳೂರು: ಆಟ- ಗಲಾಟ ಸಂಸ್ಥೆಯ ಆಶ್ರಯದಲ್ಲಿ ‘ಬೆಂಗಳೂರು ಕಾವ್ಯ ಉತ್ಸವ’ ಎರಡು ವರ್ಷಗಳ ಬಳಿಕ ಭೌತಿಕವಾಗಿ ನಡೆಯುತ್ತಿದೆ. ಇದೇ27 ಮತ್ತು 28ರಂದು ಹಳೆ ವಿಮಾನ ನಿಲ್ದಾಣ ರಸ್ತೆಯ ಲೀಲಾ ಪ್ಯಾಲೇಸ್‌ನಲ್ಲಿ
ಹಮ್ಮಿಕೊಳ್ಳಲಾಗಿದೆ.

‘ಕೋವಿಡ್‌ನಿಂದಾಗಿ 2020ರಲ್ಲಿ ಆನ್‌ಲೈನ್ ವೇದಿಕೆಯಲ್ಲಿಯೇಕಾವ್ಯ ಉತ್ಸವ ನಡೆಸಲಾಗಿತ್ತು. ಈ ಬಾರಿ ಭೌತಿಕವಾಗಿ ನಡೆಯಲಿರುವಈ ಉತ್ಸವದಲ್ಲಿ ಕಾವ್ಯ ವಾಚನದ ಜತೆಗೆ ಕಾರ್ಯಾಗಾರವನ್ನೂ ಏರ್ಪಡಿಸಲಾಗಿದೆ. ಎರಡು ದಿನಗಳ ಈ ಉತ್ಸವದಲ್ಲಿ ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಇಂಗ್ಲಿಷ್, ಹಿಂದಿ, ಕನ್ನಡ, ಮಲಯಾಳಂ, ಬಂಗಾಳಿ ಸೇರಿ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಕವಿತೆಗಳ ವಾಚನ ನಡೆಯಲಿದೆ’ ಎಂದು ಉತ್ಸವದ ನಿರ್ದೇಶಕಿ ಶೈನಿ ಆ್ಯಂಟನಿ ತಿಳಿಸಿದ್ದಾರೆ.

‘ದೇಶ ವಿದೇಶಗಳಿಂದ ಹಳೆಯ ಮತ್ತು ಹೊಸ ತಲೆಮಾರಿನ ಬಹುಭಾಷಾ ಕವಿಗಳು, ಗೀತ ರಚನೆಕಾರರು, ಹಾಡು ಗಾರರು, ಸಂಗೀತಗಾರರು ಭಾಗವಹಿಸಲಿದ್ದಾರೆ. ಉತ್ಸವವು ಕವಿತೆ, ಸಂವಾದ, ಭಾಷಣಗಳು ಹಾಗೂ ಕಾರ್ಯಾಗಾರಗಳನ್ನು ಒಳಗೊಂಡಿದೆ. ಕನ್ನಡದ ಕಾವ್ಯ ಗೋಷ್ಠಿಗಳೂ ನಡೆಯಲಿವೆ. 2016ರಿಂದ 2019ರವರೆಗೆ ನಡೆದ ಉತ್ಸವದಲ್ಲಿ ಪ್ರತಿವರ್ಷ 5 ಸಾವಿರಕ್ಕೂ ಹೆಚ್ಚು ಕಾವ್ಯಾಸಕ್ತರು ಭಾಗವಹಿಸಿದ್ದರು. ಈ ವರ್ಷ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆಯಿದೆ.ಪ್ರತಿ ವರ್ಷದಂತೆ ಈ ಬಾರಿಯೂ ಬೆಂಗಳೂರು ಸಾಹಿತ್ಯೋತ್ಸವ ಪುಸ್ತಕ ಬಹುಮಾನ ನೀಡಲಾಗುತ್ತದೆ. ಅತ್ಯುತ್ತಮ ಮುಖಪುಟ ವಿನ್ಯಾಸ ಸೇರಿ ವಿವಿಧ ವಿಭಾಗಗಳಲ್ಲಿ 7 ವಾರ್ಷಿಕಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ’ ಎಂದು
ತಿಳಿಸಿದ್ದಾರೆ.

ADVERTISEMENT

‘ಈ ಬಾರಿಯಿಂದ ‘ಅತ್ಯುತ್ತಮ ಯುವ ಲೇಖಕರ ಪುಸ್ತಕ’ ಮತ್ತು ‘ಅತ್ಯುತ್ತಮ ಮಕ್ಕಳ ಪುಸ್ತಕ’ ಎಂದು ಚಿತ್ರ ಪುಸ್ತಕಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಕನ್ನಡದಲ್ಲಿ ಸಾಹಿತ್ಯ ಸಾಧನೆಗಾಗಿ ಲೇಖಕರಿಗೆ ವಾರ್ಷಿಕ ಪ್ರಶಸ್ತಿ ಸಹ ನೀಡಲಾಗುವುದು’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.