ಬಂಧನ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಕಳವು ಮಾಡಿದ್ದ ಕಾರು ಹಾಗೂ ಬೈಕ್ಗಳಲ್ಲಿ ಬಂದು ಮನೆ, ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಬೇಗೂರಿನ ಉಲ್ಲಾಸ್ ಅಲಿಯಾಸ್ ಡಾಲಿ(24), ಯಶವಂತಪುರ ನಿವಾಸಿ ಕಿರಣ್ (23) ಎಂಬುವರನ್ನು ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಠಾಣಾ ವ್ಯಾಪ್ತಿಯ ಅಂಗಡಿಯೊಂದರ ಬಾಗಿಲು ಒಡೆದು ₹7 ಸಾವಿರ ನಗದು ದೋಚಿ ಪರಾರಿ ಆಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಹೇರೋಹಳ್ಳಿ ಬಸ್ ನಿಲ್ದಾಣದ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಎಂಟು ವರ್ಷಗಳಿಂದ ಆರೋಪಿಗಳು ಕಳ್ಳತನ ಮಾಡುತ್ತಿದ್ದರು. ಈ ಹಿಂದೆ ಬಾಲಾಪರಾಧಿಗಳಾಗಿ ಮಕ್ಕಳ ಕಲ್ಯಾಣ ಮಂಡಳಿ ಸೇರಿದ್ದರು. ಅಲ್ಲಿ ಇಬ್ಬರೂ ಪರಿಚಯವಾಗಿದ್ದರು. ಬಿಡುಗಡೆಯಾದ ಬಳಿಕ ಇಬ್ಬರೂ ಕಳ್ಳತನಕ್ಕೆ ಇಳಿದಿದ್ದರು ಎಂದು ಪೊಲೀಸರು ಹೇಳಿದರು.
ಆರೋಪಿಗಳ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 11ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಬಂಧಿತರಿಂದ ₹6 ಸಾವಿರ ನಗದು, 25 ಗ್ರಾಂ. ಚಿನ್ನಾಭರಣ, 124 ಗ್ರಾಂ. ಬೆಳ್ಳಿಯ ಸಾಮಗ್ರಿ ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.