ADVERTISEMENT

‘ಮೂರು ಪೊಲೀಸ್ ಕಮಿಷನರೇಟ್ ಅಗತ್ಯ’

‘ವೀರಪ್ಪನ್–ದಂತಚೋರನ ಬೆನ್ನಟ್ಟಿ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 20:02 IST
Last Updated 30 ಜೂನ್ 2019, 20:02 IST
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ (ಎಡದಿಂದ) ನಾಗಪ್ಪ ಮಾರಡಗಿ,ನಗರ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್, ಸಂಸದ ತೇಜಸ್ವಿ ಸೂರ್ಯ, ನಿವೃತ್ತ ಪೊಲೀಸ್ ಅಧಿಕಾರಿ ಗೋಪಾಲ ಬಿ. ಹೊಸೂರು, ಡಾ. ಗುರುಪ್ರಸಾದ್ ಇದ್ದರು
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ (ಎಡದಿಂದ) ನಾಗಪ್ಪ ಮಾರಡಗಿ,ನಗರ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್, ಸಂಸದ ತೇಜಸ್ವಿ ಸೂರ್ಯ, ನಿವೃತ್ತ ಪೊಲೀಸ್ ಅಧಿಕಾರಿ ಗೋಪಾಲ ಬಿ. ಹೊಸೂರು, ಡಾ. ಗುರುಪ್ರಸಾದ್ ಇದ್ದರು   

ಬೆಂಗಳೂರು: ‘ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮೂರು ಪೊಲೀಸ್ ಕಮಿಷನರೇಟ್‌ಗಳಾಗಿ ವಿಂಗಡಿಸುವುದು ಸೂಕ್ತ’ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಗೋಪಾಲ ಬಿ. ಹೊಸೂರು ಸಲಹೆ ನೀಡಿದರು.

ನಿವೃತ್ತ ಪೊಲೀಸ್ ಅಧಿಕಾರಿ ಡಾ.ಗುರುಪ್ರಸಾದ ಅವರು ಕನ್ನಡಕ್ಕೆ ಅನುವಾದಿಸಿರುವ ‘ವೀರಪ್ಪನ್–ದಂತಚೋರನ ಬೆನ್ನಟ್ಟಿ’ ಪುಸ್ತಕ (ಮೂಲ: ಕೆ.ವಿಜಯಕುಮಾರ್ ಅವರ ವೀರಪ್ಪನ್ ಚೇಸಿಂಗ್‌ ದಿ ಬ್ರಿಗಾಂಡ್‌) ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಕಳೆದ ಮೂರು ದಶಕಗಳಲ್ಲಿನಗರದ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ‌ಮೂರು ಭಾಗವಾಗಿ ವಿಂಗಡಿಸಿದರೆ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಬಹುದು, ಸಂಚಾರ ದಟ್ಟಣೆ ನಿಭಾಯಿಸಬಹುದು ಮತ್ತು ಗುಪ್ತಚರ ವ್ಯವಸ್ಥೆಯನ್ನು ಬಲಪಡಿಸಬಹುದು’ ಎಂದರು.

ADVERTISEMENT

‘ಮೂವರು ಕಮಿಷನರ್‌ಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು. ಈ ಮೂವರ ಮೇಲೆ ನಿಗಾ ವಹಿಸಲು ಮುಖ್ಯ ಪೊಲೀಸ್ ಕಮಿಷನರ್ ಒಬ್ಬರನ್ನು ಸರ್ಕಾರ ನೇಮಿಸಿಕೊಳ್ಳಬಹುದು’ ಎಂದು ಹೇಳಿದರು.

‘ವೀರಪ್ಪನ್ ಹಿಡಿಯುವ ಕಾರ್ಯಾಚರಣೆಯನ್ನು ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಸತತ ಎರಡು ದಶಕಗಳ ಕಾಲ ನಡೆಸಿದರು. ಇದಕ್ಕೆಗುಪ್ತಚರದ ವೈಫಲ್ಯ ಮಾತ್ರ ಕಾರಣವಲ್ಲ. ಸ್ಥಳೀಯರ ವಿಶ್ವಾಸ ಗಳಿಸುವಲ್ಲಿ ಪೊಲೀಸರು ವಿಫಲರಾಗಿದ್ದರು. ಇದೊಂದೇ ಕಾರಣದಿಂದ ವೀರಪ್ಪನ್ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ’ ಎಂದರು.‌‌

ನಗರ ಪೊಲೀಸ್ ಕಮಿಷನರ್ಅಲೋಕ್‌ಕುಮಾರ್ ಮಾತನಾಡಿ, ‘ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಮತ್ತು ಡಿಸಿಪಿಗಳು ಸಂಜೆ 4.30ರಿಂದ 6 ಗಂಟೆ ವರೆಗೆ ಸಾರ್ವಜನಿಕರ ಅಹವಾಲು ಆಲಿಸಲು ತಮ್ಮ ಕಚೇರಿಗಳಲ್ಲಿ ಲಭ್ಯ ಇರಬೇಕು ಎಂದು ಸೂಚಿಸಲಾಗಿದೆ. ಸಂಚಾರ ಪೊಲೀಸರು ಮಧ್ಯಾಹ್ನ 3ರಿಂದ 4ರವರೆಗೆ ಅಹವಾಲು ಆಲಿಸಬೇಕು’ ಎಂದರು.

‘ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲು ಜುಲೈ 15ರಂದು ಮೊದಲ ಜನಸಂಪರ್ಕ ಸಭೆಯನ್ನು ಬೆಂಗಳೂರು ದಕ್ಷಿಣದಲ್ಲಿ ನಡೆಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.