ಬೆಂಗಳೂರು: ‘ಪೊಲೀಸರು ನನಗೆ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿ ಶಿವರಾಜ್ ಎಂಬುವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಯಶವಂತಪುರ ನಿವಾಸಿ ಶಿವರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆಸ್ಪತ್ರೆಯಿಂದ ವಿಡಿಯೊ ಹರಿಬಿಟ್ಟಿರುವ ಅವರು, ‘ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಪೊಲೀಸರು ಪ್ರಯತ್ನಿಸಿದ್ದಾರೆ’ ಎಂದು ದೂರಿದ್ದಾರೆ.
‘ನಾನು ಮನೆ ಬಳಿ ಕುಳಿತಿದ್ದೆ. ಸ್ಥಳಕ್ಕೆ ಬಂದಿದ್ದ ಆರ್.ಎಂ.ಸಿ ಯಾರ್ಡ್ ಪೊಲೀಸರು, ನನ್ನನ್ನು ಠಾಣೆಗೆ ಕರೆದೊಯ್ದರು. ಗಾಂಜಾ ಬೆರೆಸಿದ್ದ ಸಿಗರೇಟ್ ಸೇದುವಂತೆ ಒತ್ತಾಯಿಸಿದ್ದರು. ನಿರಾಕರಿಸಿದ್ದಕ್ಕೆ ಬೈಯ್ದು ಕಿರುಕುಳ ನೀಡಿದರು. ನಂತರ, ಬಲವಂತವಾಗಿ ಸಿಗರೇಟ್ ಸೇದುವಂತೆ ಮಾಡಿದರು. ಅಸ್ವಸ್ಥಗೊಂಡಿದ್ದ ನನ್ನನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಿದರು. ತಾವು ಕರೆದಾಗ ಠಾಣೆಗೆ ಬರುವಂತೆ ಹೇಳಿ ಮನೆಗೆ ಕಳುಹಿಸಿದರು’ ಎಂದೂ ಶಿವರಾಜ್ ವಿಡಿಯೊದಲ್ಲಿ ಆರೋಪಿಸಿದ್ದಾರೆ.
‘ಪೊಲೀಸರು ನನ್ನನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಿದ್ದಾರೆಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದರಿಂದ ನನ್ನ ಮಕ್ಕಳ ಭವಿಷ್ಯ ಹಾಳಾಗುವ ಭಯ ಉಂಟಾಗಿದೆ’ ಎಂದೂ ಅವರು ಹೇಳಿದ್ದಾರೆ.
ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು, ‘ವಿಡಿಯೊ ಗಮನಕ್ಕೆ ಬಂದಿಲ್ಲ. ಪರಿಶೀಲಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.