ಬೆಂಗಳೂರು: ನಗರದ ಕೇಂದ್ರ ವಿಭಾಗದ ಪೊಲೀಸರು ಶನಿವಾರ ತಡರಾತ್ರಿ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯ ಪಬ್ಗಳ ಮೇಲೆ ದಾಳಿ ನಡೆಸಿದ್ದು, ಆಫ್ರಿಕನ್ ಪ್ರಜೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಎರಡು ದಿನಗಳ ಹಿಂದೆ ಪೊಲೀಸ್ ಕಮಿಷನರ್ ಕಚೇರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಕಾನೂನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅದರ ಬೆನ್ನಲೇ ಕೇಂದ್ರ ವಿಭಾಗದ ಪೊಲೀಸರು ದಾಳಿ ನಡೆಸಿ, 26 ಮಂದಿ ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಡಿಸಿಪಿ ಶ್ರೀನಿವಾಸಗೌಡ ನೇತೃತ್ವದಲ್ಲಿ ಇಬ್ಬರು ಎಸಿಪಿ, ಆರು ಮಂದಿ ಇನ್ಸ್ಪೆಕ್ಟರ್, 10 ಮಂದಿ ಪಿಎಸ್ಐ, 20 ಮಹಿಳಾ ಸಿಬ್ಬಂದಿ, 20 ಕಾನ್ಸ್ಟೆಬಲ್ಗಳು ಕಾರ್ಯಾಚರಣೆ ನಡೆಸಲಾಗಿದೆ.
ಪೊಲೀಸರ ಜತೆಗೆ ವಾಗ್ವಾದ: ಪೊಲೀಸರು ದಾಳಿ ನಡೆಸುತ್ತಿದ್ದು ತಿಳಿಯುತ್ತಿದ್ಧಂತೆಯೇ ಆಫ್ರಿಕನ್ ಪ್ರಜೆಗಳು ಅಲ್ಲಿಂದ ಓಡಲು ಆರಂಭಿಸಿದ್ದರು. ಅವರನ್ನು ಹಿಂಬಾಲಿಸಿ ವಶಕ್ಕೆ ಪಡೆದುಕೊಳ್ಳಲಾಯಿತು. ಮಹಿಳೆಯರು ವಾಗ್ವಾದಕ್ಕೆ ಇಳಿದರು ಎಂದು ಪೊಲೀಸರು ಹೇಳಿದರು.
ವಶಕ್ಕೆ ಪಡೆದವರನ್ನು ರಾತ್ರಿಯೇ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಕೆಲವರು ಮಾದಕ ಪದಾರ್ಥ ಸೇವಿಸಿರುವುದು ಪತ್ತೆಯಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುವುದು. ಎಲ್ಲರ ಪಾಸ್ಪೋರ್ಟ್ ಹಾಗೂ ವೀಸಾಗಳನ್ನು ಪರಿಶೀಲಿಸಲಾಗುವುದು. ಅಕ್ರಮವಾಗಿ ನಲೆಸಿದವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.