ಬೆಂಗಳೂರು: ನಗರದ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ವಿದ್ಯುತ್ ಕಂಬಗಳ ಸ್ಥಳಾಂತರ ಕೆಲಸ ಆರಂಭವಾಗಿದೆ. ಸಂಚಾರ ಪೊಲೀಸರು ಸಲ್ಲಿಸಿದ್ದ ಮನವಿಗೆ ಬೆಸ್ಕಾಂ ಅಧಿಕಾರಿಗಳು ಸ್ಪಂದಿಸಿದ್ದಾರೆ.
ಜಾಲಹಳ್ಳಿ ಪಶ್ಚಿಮ ಭಾಗದ ಮೆಟ್ರೊ ಸಮೀಪ, ಬಾಗಲಗುಂಟೆ ಸೇರಿ 42, ಬಸವನಗುಡಿ ವಿಭಾಗದಲ್ಲಿ 3, ಕೆಂಗೇರಿಯ ಉತ್ತರಹಳ್ಳಿ ಬಳಿ 4, ಪೀಣ್ಯ ವಿಭಾಗದ ಹೆಸರಘಟ್ಟ ಮುಖ್ಯರಸ್ತೆ, ಜನಪ್ರಿಯ ಜಂಕ್ಷನ್ ಸೇರಿದಂತೆ ನಗರದ ವಿವಿಧೆಡೆ 70 ಕಂಬಗಳನ್ನು ಸ್ಥಳಾಂತರಿಸಲಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.10 ದಿನಗಳ ಹಿಂದೆ ಮನವಿ ಸಲ್ಲಿಸಲಾಗಿತ್ತು.
ರಸ್ತೆ ಬದಿಯಲ್ಲಿದ್ದ 135 ವಿದ್ಯುತ್ ಕಂಬಗಳ ಸ್ಥಳಗಳನ್ನು ಗುರುತಿಸಿ ಪಟ್ಟಿ ನೀಡಿದ್ದರು. ಈಗಾಗಲೇ 70 ಕಡೆ ಸ್ಥಳಾಂತರಿಸಿದ್ದು, ಉಳಿದೆಡೆ ಸ್ಥಳಾಂತರ ಕಾರ್ಯ ಪ್ರಗತಿಯಲ್ಲಿದೆ’ ಎಂದು ಬೆಸ್ಕಾಂ ನಿರ್ದೇಶಕಿ ಸಿ.ಶಿಖಾ ಹೇಳಿದರು. ಇದನ್ನು ಹೆಚ್ಚುವರಿ ಪೊಲೀಸ್ (ಸಂಚಾರ) ಆಯುಕ್ತ ಪಿ.ಹರಿಶೇಖರನ್ ಶ್ಲಾಘಿಸಿದ್ದಾರೆ.
‘ಬೆಸ್ಕಾಂನಲ್ಲಿ ಸಮರ್ಥ ಉದ್ಯೋಗಿಗಳಿಲ್ಲವೆ’
‘ನಿಜಕ್ಕೂ ಇದೊಂದು ಒಳ್ಳೆಯ ಕೆಲಸ. ದುರದೃಷ್ಟಕರ ಸಂಗತಿಯೆಂದರೆ ಬೆಸ್ಕಾಂ ಕೆಲಸವನ್ನು ಸಂಚಾರ ಪೊಲೀಸರು ಮಾಡುತ್ತಿರುವುದು. ಬೆಸ್ಕಾಂನಲ್ಲಿ ಸಮರ್ಥ ಉದ್ಯೋಗಿಗಳು ಇಲ್ಲವೇ’ ಎಂದು ಟ್ವಿಟರ್ನಲ್ಲಿ ಶ್ರೀಧರ್ ಎಂಬುವರು ಪ್ರಶ್ನಿಸಿದ್ದಾರೆ.
ಕಂಬ ಸ್ಥಳಾಂತರಿಸುತ್ತಿರುವುದನ್ನು ‘ಬೆಂಗಳೂರು ಟ್ರಾಫಿಕ್ ಪೊಲೀಸ್’ ಮಾಡಿದ್ದ ಪೋಸ್ಟ್ಗೆ ಸಾರ್ವಜನಿಕರೂ ಪ್ರತಿಕ್ರಿಯಿಸಿದ್ದಾರೆ. ಡಿ.ಎಸ್.ನಾಯರ್, ವಿನೋದ್ ಕುಮಾರ್, ಸುನಿಲ್ ಡಿಸೋಜ ಬೆಸ್ಕಾಂ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.