ADVERTISEMENT

‘ಪ್ರೇಮಬರಹ’ದ ಸೇಡು: ಚೇತನ್ ವಿರುದ್ಧ ರಾಜೇಶ್ ಆರೋಪ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 11:31 IST
Last Updated 22 ಅಕ್ಟೋಬರ್ 2018, 11:31 IST
ರಾಜೇಶ್‌, ಶ್ರುತಿ ಹರಿಹರನ್
ರಾಜೇಶ್‌, ಶ್ರುತಿ ಹರಿಹರನ್   

ಬೆಂಗಳೂರು: ‘ಪ್ರೇಮ ಬರಹ’ ಸಿನಿಮಾದಲ್ಲಿ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆನಟ ಚೇತನ್‌, ಈಗ ಶ್ರುತಿ ಹರಿಹರನ್‌ ಪರವಾಗಿ ನಿಂತು ಸೇಡು ತೀರಿಸಿಕೊಳ್ಳುತ್ತಿದ್ದಾರೆ’ ಎಂದು ಅರ್ಜುನ್‌ ಸರ್ಜಾ ಅವರ ಮಾವ ರಾಜೇಶ್‌ ಆರೋಪಿಸಿದರು.

ಶ್ರುತಿ ಹರಿಹರನ್‌ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅರ್ಜುನ್‌ ಸರ್ಜಾ ಪ್ರೇಮ ಬರಹ ಚಿತ್ರ ನಿರ್ದೇಶಿಸಿದ್ದರು. ಈ ಚಿತ್ರದ ನಾಯಕನಾಗಿ ಮೊದಲಿಗೆ ನಟ ಚೇತನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅವರ ಬದಲಿಗೆ ಮತ್ತೊಬ್ಬರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ಅದೇ ಸೇಡನ್ನು ಚೇತನ್‌ ಈಗ ತೀರಿಸಿಕೊಳ್ಳುತ್ತಿದ್ದಾರೆ’ ಎಂದರು.

‘ಚಿತ್ರರಂಗದಲ್ಲಿ ಮಡಿವಂತಿಕೆ, ಮೈಲಿಗೆ ಎಂಬುದು ಇಲ್ಲ.ನನ್ನ ಅಳಿಯ ಅರ್ಜುನ್ ಸರ್ಜಾ ವಿರುದ್ಧ ಆರೋಪ ಕೇಳಿಬಂದಿದೆ. ಹಾಗಾಗಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದೇನೆ. ಈ ಸಂಬಂಧ ಮಂಡಳಿ ಕೈಗೊಳ್ಳುವ ಕ್ರಮಕ್ಕೆ ನಾನು ಬದ್ಧ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಅರ್ಜುನ್ ಅವರನ್ನು ಸುಮಾರು ವರ್ಷಗಳಿಂದ ನೋಡುತ್ತಿದ್ದೇನೆ. ಹಿರಿಯ ಕಲಾವಿದೆಯರ ಜೊತೆಗೂಅಭಿನಯಿಸಿದ್ದಾರೆ. ಅವರ ವಿರುದ್ಧ ಒಂದೂ ದೂರು ಇಲ್ಲ. 8-10 ವರ್ಷದ ಹಿಂದಿನದ್ದನ್ನು ತೆಗೆದು ರಗಳೆ ಮಾಡುವ ರೋಗ ಶುರುವಾಗಿದೆ. ಇದು ಎಷ್ಟರ ಮಟ್ಟಿಗೆಸರಿ’ ಎಂದು ಪ್ರಶ್ನಿಸಿದ್ದಾರೆ.

‘ಇವರೆಲ್ಲ ಇತ್ತೀಚೆಗೆ ಬಂದ ನಟಿಯರು ಸರಿಯಾಗಿ ಕನ್ನಡ ಮಾತಾಡೋಕೆ ಬರಲ್ಲ. ಇವರೆಲ್ಲ ಅರ್ಜುನ್ ಮೇಲೆ ಆಪಾದನೆ ಮಾಡುತ್ತಾರೆ. ಆಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ’ ಎಂದು ಕಿಡಿಕಾರಿದ್ದಾರೆ.

ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಮಾತನಾಡಿ, ‘ರಾಜೇಶ್ ಅವರು ಸಲ್ಲಿಸಿರುವ ದೂರಿನ ಸಂಬಂಧಸಂಜೆ ತುರ್ತು ಸಭೆ ನಡೆಸಿ, ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.